Homeರಾಜ್ಯAkashvani: ಧಾರವಾಡದ 'ಬಾನುಲಿ'ಯ ಉಸಿರು ಕಟ್ಟಿಸುವ ಸಂಚು: ಸುದ್ದಿ ವಿಭಾಗದ ಸ್ಥಳಾಂತರ ಬರಿ ಆಡಳಿತಾತ್ಮಕವಲ್ಲ, ಸಾಂಸ್ಕೃತಿಕ...

Akashvani: ಧಾರವಾಡದ ‘ಬಾನುಲಿ’ಯ ಉಸಿರು ಕಟ್ಟಿಸುವ ಸಂಚು: ಸುದ್ದಿ ವಿಭಾಗದ ಸ್ಥಳಾಂತರ ಬರಿ ಆಡಳಿತಾತ್ಮಕವಲ್ಲ, ಸಾಂಸ್ಕೃತಿಕ ಹರಣ!

“ಇದು ಆಕಾಶವಾಣಿ (Akashvani) ಧಾರವಾಡ… ಪ್ರಾದೇಶಿಕ ಸುದ್ದಿಗಳು…” ಅನ್ನೋ ಆ ಗಂಭೀರ ದನಿ ಕೇಳಿದ್ರ ಸಾಕು, ಉತ್ತರ ಕರ್ನಾಟಕದ ಮಂದಿಗೆ ಹೊತ್ತಾರೆಯ ಚಹಾ ಕುಡಿದಷ್ಟು ಸಮಾಧಾನ ಆಗ್ತಿತ್ತು. ಆದ್ರ ಈಗ ಕೇಳಿ ಬರ್ತಿರೋ ಸುದ್ದಿ ಹಂಗಿಲ್ಲ. ದಶಕಗಳಿಂದ ನಮ್ಮ ಕಷ್ಟ-ಸುಖಕ್ಕೆ ದನಿಯಾಗಿದ್ದ ಧಾರವಾಡ ಆಕಾಶವಾಣಿಯ ಪ್ರಾದೇಶಿಕ ಸುದ್ದಿ ವಿಭಾಗವನ್ನ ಎತ್ತಿಕೊಂಡು ಹೋಗಿ ಬೆಂಗಳೂರಿನ ಮಡಿಲಿಗೆ ಹಾಕೋಕೆ ತಯಾರಿ ನಡೆದಿದೆ ಅಂತ. ಇದು ಬರಿ ಒಂದು ಕಚೇರಿ ಶಿಫ್ಟ್ ಮಾಡೋ ಕೆಲಸ ಅಲ್ಲಪ್ಪಾ, ಇದು ಈ ಭಾಗದ ಮಣ್ಣಿನ ಅಸ್ಮಿತೆಯನ್ನ, ನಮ್ಮ ಭಾಷೆಯ ಗತ್ತನ್ನ ಹಿಸುಕಿ ಕೊಲ್ಲೋ ಸಂಚು!

ನಮ್ಮ ದನಿ ನಿಮಗ್ಯಾಕ ಭಾರ ಆತು?

ಧಾರವಾಡ ಆಕಾಶವಾಣಿ (Akashvani) ಅಂದ್ರ ಬರಿ ರೇಡಿಯೋ ಸ್ಟೇಷನ್ ಅಲ್ಲ, ಅದು ನಮಗೊಂದು ದೇವಸ್ಥಾನವಿದ್ದಂತೆ. 1981ರೊಳಗೆ ಮೊದಲ ಬುಲೆಟಿನ್ ಶುರುವಾದಾಗಿನಿಂದ ಇವತ್ತಿನವರೆಗೆ, ಇಲ್ಲಿನ ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಗೆ ಇದು ದೊಡ್ಡ ಆಸರೆಯಾಗಿತ್ತು. ಅಸಲಿಗೆ ಇದರ ಇತಿಹಾಸ ನೋಡ್ರಿ, ಆಗಿನ ಕೇಂದ್ರ ಮಂತ್ರಿಯಾಗಿದ್ದ ಆರ್.ಆರ್. ದಿವಾಕರ ಅವರು ಈ ಆಕಾಶವಾಣಿಯನ್ನು 1950ರ ಜ. 8ರಂದು ಉದ್ಘಾಟಿಸಿದ್ರು. ಆವತ್ತು ಭಾರತ ರತ್ನ ಭೀಮಸೇನ ಜೋಶಿಯವರು ತಮ್ಮ ಸಹಚರರೊಡನೆ ‘ವಂದೇಮಾತರಂ’ ಮತ್ತು ‘ಉದಯವಾಗಲಿ ಚೆಲುವ ಕನ್ನಡ ನಾಡು’ ಹಾಡಿದ್ದು ಇವತ್ತಿಗೂ ಹಸಿರಾದ ಇತಿಹಾಸ. ಇಷ್ಟೊಂದು ಘನವಾದ ಪರಂಪರೆ ಇರೋ ಕೇಂದ್ರದ ಸುದ್ದಿ ವಿಭಾಗಕ್ಕೆ ಈಗ “ಕೆಲಸದ ಹೊರೆ ಹೆಚ್ಚಾಗಿದೆ” ಅನ್ನೋ ಕುಂಟು ನೆಪ ಹೇಳಿ ಬೆಂಗಳೂರಿಗೆ ವರ್ಗಾವಣೆ ಮಾಡ್ತಾರಂತೆ. ನಮಗೊಂದು ಮಾತು ತಿಳಿಯವಲ್ದು, ಕೆಲಸ ಹೆಚ್ಚಾದ್ರ ಆಳುಗಳನ್ನ (ಸಿಬ್ಬಂದಿ) ನೇಮಕ ಮಾಡ್ಕೊಬೇಕು ಹೊರತು, ಮನೆ ಖಾಲಿ ಮಾಡಿಸ್ತಾರೇನೋ?

ಅಂಕಿ-ಅಂಶಗಳ ಕಣ್ಣಲ್ಲಿ ನಮ್ಮ ಶಕ್ತಿ

ಒಂದು ಸಲ ಧಾರವಾಡ ಆಕಾಶವಾಣಿ (Akashvani) ಕೇಂದ್ರದ ವ್ಯಾಪ್ತಿ ನೋಡ್ರಿ, ಅವಾಗ ತಿಳೀತೈತಿ ಇದರ ತಾಕತ್ತು ಏನೆಂದು:

  • ವಿಶಾಲ ವ್ಯಾಪ್ತಿ: ಧಾರವಾಡ ಅಷ್ಟೇ ಅಲ್ಲದೇ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಬಳ್ಳಾರಿ ಹೀಗೆ ಇಡೀ ಉತ್ತರ ಕರ್ನಾಟಕದ 13 ಜಿಲ್ಲೆಗಳ ಸುದ್ದಿಗಳು ಇಲ್ಲೇ ಸಿದ್ಧ ಆಗ್ತಿದ್ದವು.
  • ಸಮಯದ ಬದ್ಧತೆ: ಪ್ರತಿದಿನ ಬೆಳಿಗ್ಗೆ 7.05ಕ್ಕೆ ಬಿತ್ತರವಾಗುವ 10 ನಿಮಿಷದ ಸುದ್ದಿ ಕೇಳದಿದ್ರೆ ನಮ್ಮ ರೈತರಿಗೆ, ಹಿರಿಯರಿಗೆ ದಿನವೇ ಶುರು ಆಗ್ತಿರಲಿಲ್ಲ. ಸೋಮವಾರದ ‘ಜಿಲ್ಲಾ ಪತ್ರ’, ಶನಿವಾರದ ‘ಸುದ್ದಿ ನಿಯತಕಾಲಿಕೆ’ ಈ ಭಾಗದ ನಾಡಿಮಿಡಿತ ಹಿಡಿತಿದ್ದವು. ಇಂದಿಗೂ ಸಾವಿರಾರು ಜನರು ತಮ್ಮ ದೈನಂದಿನ ಚಟುವಟಿಕೆಗಳನ್ನು ‘ವಂದನ ಚಿಂತನ’ ಪ್ರಸಾರದೊಂದಿಗೆ ಪ್ರಾರಂಭಿಸುತ್ತಾರೆ ಅನ್ನೋದು ಈ ಕೇಂದ್ರದ ಗಟ್ಟಿತನಕ್ಕೆ ಸಾಕ್ಷಿ.
  • ಸ್ಥಳೀಯ ವರದಿಗಾರರು: ಹಳ್ಳಿ ಹಳ್ಳಿಗಳಿಂದ ಅರೆಕಾಲಿಕ ವರದಿಗಾರರು ಕಳಿಸೋ ಸುದ್ದಿಗಳನ್ನ ನಮ್ಮ ಧಾರವಾಡದ ಭಾಷೆಯೊಳಗೆ ಅಚ್ಚುಕಟ್ಟಾಗಿ ಓದೋ ಮಜಾನೇ ಬೇರೆ ಇತ್ತು. ಈಗ ಬೆಂಗಳೂರಿನಲ್ಲಿ ಕೂತು ನಮ್ಮ ಬಳ್ಳಾರಿ ಬಿಸಿಲನ್ನೋ ಅಥವಾ ವಿಜಯಪುರದ ಮಳೆಯನ್ನೋ ಅವರು ಹೆಂಗೆ ಅನುಭವಿಸಿ ಹೇಳ್ತಾರೋ ಆ ದೇವರಿಗೇ ಗೊತ್ತು.

ಇದನ್ನೂ ಓದಿ: Vinay Kulkarni: ಸಿಬಿಐ ತನಿಖೆಯೋ ಅಥವಾ ಬಿಜೆಪಿಯ ಸ್ಕ್ರಿಪ್ಟೋ? ಹಿರಿಯ ವಕೀಲ ಬಾಲನ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ!

ಇದು ಬರಿ ಸುದ್ದಿಯಲ್ಲ, ಸಾಂಸ್ಕೃತಿಕ ಪರಂಪರೆ

ಆಕಾಶವಾಣಿ ಧಾರವಾಡವು ಬರಿ ಸುದ್ದಿಯ ಕೇಂದ್ರವಲ್ಲ; ಇದು ದ.ರಾ. ಬೇಂದ್ರೆ, ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಚೆನ್ನವೀರ ಕಣವಿ, ಗಿರೀಶ್ ಕಾರ್ನಾಡ್, ಬಾಳಪ್ಪ ಹುಕ್ಕೇರಿ, ಗಂಗೂಬಾಯಿ ಹಾನಗಲ್ ಮತ್ತು ಇತರ ಅನೇಕ ದೈತ್ಯ ಪ್ರತಿಭೆಗಳ ಪ್ರೀತಿಯ ಮಾಧ್ಯಮವಾಗಿತ್ತು. ಇಲ್ಲಿನ ಕಾಕಾ, ನಾನಿ ಕಾಕಾ ಮತ್ತು ಅಕ್ಕಮ್ಮರಂತಹ ರೇಡಿಯೋ ದಂತಕಥೆಗಳು ವಿಶೇಷವಾಗಿ ಗ್ರಾಮೀಣ ಪ್ರೇಕ್ಷಕರಲ್ಲಿ ಇವತ್ತಿಗೂ ಅಚ್ಚಳಿಯದ ನೆನಪು. ಬೇಂದ್ರೆ ಅಜ್ಜ, ಬುಧವಾರದಂದು ಭೋಜನದ ನಂತರ ಸಾಧನಕೇರಿಯ ಬೀದಿಗಳಲ್ಲಿ ನಡೆದುಕೊಂಡು ಹೋಗುವಾಗ, ಮನೆ ತಲುಪುವ ಮೊದಲು ರೇಡಿಯೊದಲ್ಲಿ ಪ್ರಸಾರವಾಗುವ ನಾಟಕಗಳನ್ನು ರಸ್ತೆಯಲ್ಲೇ ನಿಂತು ಕೇಳುತ್ತಿದ್ದರಂತೆ! ಅಂತಹ ಸಾಹಿತಿಗಳ ನಗರ ಧಾರವಾಡ ಇವತ್ತು ತನ್ನ ದನಿಯನ್ನೇ ಕಳೆದುಕೊಳ್ಳೋ ಹಂತಕ್ಕೆ ಬಂದಿರೋದು ದುರಂತ. ಬೆಂಗಳೂರಿಗೆ ಎಲ್ಲವನ್ನೂ ಕೇಂದ್ರೀಕೃತ ಮಾಡೋ ಹಪಾಹಪಿಯಿಂದಾಗಿ ಪ್ರಾದೇಶಿಕ ಅಸ್ಮಿತೆಗಳು ಸತ್ತು ಹೋಗ್ತಿವೆ. ಒಂದು ವೇಳೆ ಸುದ್ದಿ ವಿಭಾಗ ಅಲ್ಲಿಗೆ ಹೋದ್ರೆ, ಇಲ್ಲಿನ ಸೃಜನಶೀಲ ಮನಸ್ಸುಗಳಿಗೆ, ಇಲ್ಲಿನ ಹೊಸ ಪ್ರತಿಭೆಗಳಿಗೆ ವೇದಿಕೆ ಎಲ್ಲಿಂದ ಸಿಗಬೇಕು?

‘ತಾತ್ಕಾಲಿಕ’ ಅನ್ನೋದು ವಿಷದ ಮಾತ್ರೆ!

ಪ್ರಸಾರ ಭಾರತಿ ಅಧಿಕಾರಿಗಳು ಹೇಳ್ತಾರೆ “ಇದು ಬರಿ ತಾತ್ಕಾಲಿಕ ಅಷ್ಟೇ” ಅಂತ. ನಮಗ ಇವೆಲ್ಲ ಹೊಸದಲ್ಲ. ಮೊದಲು ಇವತ್ತಿನ ಗದ್ದಲ ತಪ್ಪಿಸೋಕೆ ‘ತಾತ್ಕಾಲಿಕ’ ಅಂತಾರ, ಆಮೇಲೆ ಅದನ್ನೇ ‘ಶಾಶ್ವತ’ ಮಾಡ್ತಾರ. ಧಾರವಾಡದ ಎಷ್ಟೋ ಕಚೇರಿಗಳು ಹೀಗೆ ಒಂದೊಂದಾಗಿ ಬೆಂಗಳೂರು ಸೇರಿವೆ. ಇದು ವಿದ್ಯಾಕಾಶಿ ಧಾರವಾಡಕ್ಕೆ ಮಾಡ್ತಿರೋ ಅನ್ಯಾಯ ಅಷ್ಟೇ ಅಲ್ಲ, ಈ ಭಾಗದ ಪ್ರತಿಯೊಬ್ಬ ಕನ್ನಡಿಗನಿಗೆ ಮಾಡ್ತಿರೋ ಅವಮಾನ. ಧಾರವಾಡದ ಕನ್ನಡಕ್ಕೂ ಬೆಂಗಳೂರು ಕನ್ನಡಕ್ಕೂ ವ್ಯತ್ಯಾಸ ಐತಿ. ಇಲ್ಲಿನ ಸುದ್ದಿ ಬಿತ್ತರಿಸುವಾಗ ಇರುವ ಆ ಕಳಕಳಿ, ಆ ಭಾವ ಬೆಂಗಳೂರಿನ ಎಸಿ ರೂಮಿನಲ್ಲಿ ಕೂತು ಸುದ್ದಿ ಓದೋರಿಗೆ ಬರೋಕೆ ಸಾಧ್ಯವಿಲ್ಲ.

ನಮ್ಮ ನಾಯಕರಿಗೆ ಏನಾತು?

ಧಾರವಾಡ ಅಂದ್ರೆ ಸಾಹಿತ್ಯದ ತವರೂರು ಅಂತೀವಿ, ದೊಡ್ಡ ದೊಡ್ಡ ನಾಯಕರನ್ನು ಬೆಳೆಸಿದ ನಾಡು ಅಂತೀವಿ. ಈಗ ನಮ್ಮ ಸಂಸದರು, ಕೇಂದ್ರದಲ್ಲಿ ಸಚಿವರೂ ಆಗಿರೋ ಪ್ರಲ್ಹಾದ್ ಜೋಶಿಯವರು ಈ ಮಣ್ಣಿನ ಮಗನಾಗಿ ಸುಮ್ಮನೆ ಕುಳಿತಿರೋದು ನೋಡಿದ್ರೆ ಹೊಟ್ಟೆ ಉರಿತೈತಿ. ಕೇಂದ್ರ ಸರ್ಕಾರದಲ್ಲಿ ಇಷ್ಟೊಂದು ಪ್ರಭಾವ ಇದ್ದ ಮೇಲೂ ನಮ್ಮ ಮನೆ ದೀಪವನ್ನ ಯಾರೋ ಬಂದು ಆರಿಸ್ತಿದ್ದಾರೆ ಅಂದ್ರೆ ಏನರ್ಥ? ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿಯೇ ಉತ್ತರ ಕರ್ನಾಟಕ ಇವತ್ತು ಸಾಂಸ್ಕೃತಿಕವಾಗಿ ಅನಾಥ ಆಗ್ತಿದೆ. ಕೈಕಟ್ಟಿ ಕುಳಿತುಕೊಳ್ಳೋ ಕಾಲ ಇದಲ್ಲ, ನಮ್ಮ ದನಿಯನ್ನ ಉಳಿಸಿಕೊಳ್ಳೋಕೆ ಹಠಕ್ಕೆ ಬೀಳೋ ಕಾಲ ಇದು.

ಇದನ್ನೂ ಓದಿ: Vinay Kulkarni ಕೊಲೆಗಾರನಲ್ಲ, ಪಿತೂರಿದಾರ? ಮಾಫಿ ಸಾಕ್ಷಿಯ ಮಾಸ್ಟರ್ ಸ್ಟ್ರೋಕ್ ಗೆ ಕೇಸ್‌ ಜಾತಕವೇ ಬದಲಾಯಿತೇ?

ಎಚ್ಚರಿಕೆ ಇರಲಿ!

ಆಕಾಶವಾಣಿ ಅಂದ್ರೆ ಅದು ಬರಿ ರೇಡಿಯೋ ಅಲ್ಲ, ಅದು ಲಕ್ಷಾಂತರ ಮಂದಿಯ ಶಕ್ತಿ. ಜನರ ಭಾವನೆಗಳ ಜೊತೆ ಆಟವಾಡೋದನ್ನ ಬಿಟ್ಟು, ಕೂಡಲೇ ಈ ಸ್ಥಳಾಂತರದ ಆದೇಶವನ್ನ ವಾಪಸ್ ಪಡೀಬೇಕು. ಕೆಲಸದ ಹೊರೆ ಹೆಚ್ಚಾಗಿದ್ರೆ ಸಿಬ್ಬಂದಿ ನೇಮಕ ಮಾಡ್ರಿ, ತಂತ್ರಜ್ಞಾನ ಅಪ್‌ಗ್ರೇಡ್ ಮಾಡ್ರಿ. ಅದನ್ನ ಬಿಟ್ಟು ಕಚೇರಿ ಎತ್ತಿಕೊಂಡು ಹೋಗೋದು ಬುದ್ಧಿವಂತಿಕೆ ಅಲ್ಲ.

ಉತ್ತರ ಕರ್ನಾಟಕದ ಜನ ಸಮಾಧಾನಿಯಾಗಿದ್ದಾರೆ ಅಂದ್ರೆ ಅದರರ್ಥ ನಾವು ಯಾವುದಕ್ಕೂ ಬಗ್ಗುತ್ತೀವಿ ಅಂತಲ್ಲ. ನಮ್ಮ ಅಸ್ಮಿತೆಗೆ ಧಕ್ಕೆ ಬಂದಾಗ ನಾವು ಎದ್ದು ನಿಲ್ತೀವಿ. ಧಾರವಾಡದ ದನಿ ಧಾರವಾಡದಿಂದಲೇ ಬರಲಿ, ಅದು ಉತ್ತರ ಕರ್ನಾಟಕದ ಹೆಮ್ಮೆಯಾಗಿ ಉಳಿಲಿ. ಪ್ರಸಾರ ಭಾರತಿಯ ಈ ‘ಕರಾಳ’ ಆದೇಶ ರದ್ದಾಗುವವರೆಗೆ ಈ ಹೋರಾಟ ನಿಲ್ಲೋದಿಲ್ಲ.

ನಮ್ಮ ಮಣ್ಣಿನ ಋಣ ತೀರಿಸೋಕೆ ಆಗದಿದ್ರೂ ಪರವಾಗಿಲ್ಲ, ಇರೋದನ್ನ ಕಿತ್ತುಕೊಂಡು ಹೋಗೋ ದ್ರೋಹ ಮಾಡ್ಬೇಡಿ!

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments