Homeರಾಜ್ಯLokayukta raid: ಲಂಚಬಾಕ ಅಧಿಕಾರಿಗಳ ಸೊಕ್ಕಿಗೆ ಲೋಕಾಯುಕ್ತ ‘ಕೊಡಲಿ ಪೆಟ್ಟು’: ಸುಲಿಗೆಗೆ ಇಳಿದಿದ್ದ ಕೆರೂರ ಪಿಎಸ್‌ಐಗೆ...

Lokayukta raid: ಲಂಚಬಾಕ ಅಧಿಕಾರಿಗಳ ಸೊಕ್ಕಿಗೆ ಲೋಕಾಯುಕ್ತ ‘ಕೊಡಲಿ ಪೆಟ್ಟು’: ಸುಲಿಗೆಗೆ ಇಳಿದಿದ್ದ ಕೆರೂರ ಪಿಎಸ್‌ಐಗೆ ಬಿತ್ತು ‘ಬ್ರಹ್ಮಗಂಟು’!

ಯಾವಾಗ ರಕ್ಷಣೆ ನೀಡಬೇಕಾದ ಕೈಗಳೇ ಸುಲಿಗೆಗೆ ಇಳಿಯುತ್ತವೆಯೋ, ಅಂದು ವ್ಯವಸ್ಥೆಯ ಮೇಲಿನ ನಂಬಿಕೆ ಸಡಿಲವಾಗುತ್ತದೆ. ಕೆರೂರ ಪೊಲೀಸ್ ಠಾಣೆಯ ಪಿಎಸ್‌ಐ ಭೀಮಪ್ಪ ರಬಕವಿ ಪ್ರಕರಣ ಕೇವಲ ಒಂದು ಲಂಚದ ಕೇಸ್ ಅಲ್ಲ; ಇದು ಅಧಿಕಾರದ ಅಹಂಕಾರಕ್ಕೆ ಬಿದ್ದ ದೊಡ್ಡ ಪೆಟ್ಟು…

ರಕ್ಷಕನೇ ಭಕ್ಷಕನಾದಾಗ…

ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಪೊಲೀಸ್ ಇಲಾಖೆ ‘ಜನಸ್ನೇಹಿ’ಯಾಗಿರಬೇಕು ಎನ್ನುವುದು ಪ್ರಜಾಪ್ರಭುತ್ವದ ಆಶಯ. ಆದರೆ ಬಾದಾಮಿ ತಾಲೂಕಿನ ಕೆರೂರ ಪೊಲೀಸ್ ಠಾಣೆಯ ಪಿ.ಎಸ್.ಐ ಭೀಮಪ್ಪ ರಬಕವಿ ಮತ್ತು ಸಿಬ್ಬಂದಿ ಸಂತೋಷ್ ಬಿರಾದಾರ ಮಾಡಿದ್ದು ಮಾತ್ರ ಸಂಪೂರ್ಣ ವಿರುದ್ಧವಾದ ಕೆಲಸ. ಸುಳ್ಳು ಕೇಸ್ ದಾಖಲಿಸುವ ಬೆದರಿಕೆ ಹಾಕಿ, ಅಮಾಯಕರಿಂದ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟ ಈ ಘಟನೆ, ಅಧಿಕಾರ ದುರ್ಬಳಕೆಯ ಪರಾಕಾಷ್ಠೆಯನ್ನು ತೋರಿಸುತ್ತದೆ.

ಪ್ರಕರಣದ ಹಿನ್ನೆಲೆ ಮತ್ತು ಹಪಾಹಪಿ

ಮುತ್ತಪ್ಪ ಹುಲ್ಲಪ್ಪ ನಾಯ್ಕರ ಎಂಬುವವರ ಸ್ನೇಹಿತ ಶಂಕ್ರಪ್ಪ ಬೂದಿಹಾಳ ಅವರ ಮೋಟಾರ್ ಸೈಕಲ್ ಜಪ್ತಿ ಮಾಡಿ, ಅವರ ಮೇಲೆ ಇಸ್ಪೀಟ್ ಮತ್ತು ಬಡ್ಡಿ ವ್ಯವಹಾರದ ಸುಳ್ಳು ಆರೋಪ ಹೊರಿಸುವ ಬೆದರಿಕೆ ಹಾಕಲಾಗಿತ್ತು. ಈ ಆರೋಪದಿಂದ ಮುಕ್ತಗೊಳಿಸಲು ರೂ. 1,70,000 ಲಂಚಕ್ಕೆ ಬೇಡಿಕೆಯಿಟ್ಟ ಅಧಿಕಾರಿಗಳು, ಕೊನೆಗೆ ಹಣ ಪಡೆಯುವಾಗಲೇ ಲೋಕಾಯುಕ್ತದ ಬಲೆಗೆ ಬಿದ್ದಿದ್ದಾರೆ. ಕೇವಲ ಹಣಕ್ಕಾಗಿ ಒಬ್ಬ ವ್ಯಕ್ತಿಯ ಚಾರಿತ್ರ್ಯ ಮತ್ತು ಸ್ವಾತಂತ್ರ್ಯದ ಮೇಲೆ ಸವಾರಿ ಮಾಡುವ ಈ ಪ್ರವೃತ್ತಿ ಅತ್ಯಂತ ಅಪಾಯಕಾರಿ.

ಇದನ್ನೂ ಓದಿ: RB Timmapur: ಅಬಕಾರಿ ಸಚಿವರ ತವರಲ್ಲೇ ಎಗ್ಗಿಲ್ಲದ ಮದ್ಯದ ದರ್ಬಾರ್! ಮಾಧ್ಯಮ ರಂಗಕ್ಕೂ ಅಂಟಿದ ‘ಸರಾಯಿ’ ಕಳಂಕ (Part 2)

ಬಾದಾಮಿಯಲ್ಲಿ ಹಬ್ಬದ ವಾತಾವರಣ: ಸಂಭ್ರಮಿಸಿದ ಜನತೆ!

ಈ ದಾಳಿಯ ವಿಶೇಷತೆಯೆಂದರೆ, ಅಧಿಕಾರಿಗಳು ಸಿಕ್ಕಿಬಿದ್ದ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ಇಡೀ ಕೆರೂರ ಪಟ್ಟಣದಲ್ಲಿ ಅಭೂತಪೂರ್ವ ಸಂಭ್ರಮ ಮನೆಮಾಡಿತ್ತು. ಸಾಮಾನ್ಯವಾಗಿ ಇಂತಹ ದಾಳಿಗಳು ನಡೆದಾಗ ಜನರು ಕುತೂಹಲದಿಂದ ನೋಡುತ್ತಾರೆ, ಆದರೆ ಇಲ್ಲಿನ ಚಿತ್ರಣವೇ ಬೇರೆಯಾಗಿತ್ತು.

  • ಸಾರ್ವಜನಿಕರ ಆಕ್ರೋಶಕ್ಕೆ ಸಿಕ್ಕ ಜಯ: ದಾಳಿಯ ಬೆನ್ನಲ್ಲೇ ಪಟ್ಟಣದ ಯುವಕರು ಮತ್ತು ಸಾರ್ವಜನಿಕರು ರಸ್ತೆಗೆ ಇಳಿದು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಈ ಅಧಿಕಾರಿಯ ದರ್ಪ ಮತ್ತು ಭ್ರಷ್ಟಾಚಾರದಿಂದ ಜನ ಎಷ್ಟು ರೋಸಿ ಹೋಗಿದ್ದರು ಎಂಬುದಕ್ಕೆ ಈ ಸಂಭ್ರಮವೇ ಸಾಕ್ಷಿ. “ಬರೀ ರೊಕ್ಕ ರೊಕ್ಕ ಅಂತ ಸಾಯ್ತಿದ್ದ, ಇವನನ್ನ ನೋಡಿದಾಗಿನಿಂದ ಇಡೀ ಪೊಲೀಸ್ ವ್ಯವಸ್ಥೆನೇ ಹಿಂಗ ಅದ ಏನೋ ಅಂತ ಅನಿಸಿಬಿಟ್ಟಿತ್ತು. ಈಗ ಅವನ ಪಾಪದ ಕೊಡ ತುಂಬಿ ಬಂದಿತ್ತು, ಸರಿಯಾಗಿ ತಗಲಾಕ್ಕೊಂಡ,” ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ಅಸಲಿ ಸುದ್ದಿ ಸಂಸ್ಥೆಯೊಂದಿಗೆ ತಮ್ಮ ಮನದಾಳದ ಆಕ್ರೋಶವನ್ನು ಹಂಚಿಕೊಂಡಿದ್ದಾರೆ.

ಸವಾಲು ಮತ್ತು ಅನಿವಾರ್ಯತೆ

ಬಾಗಲಕೋಟೆ ಲೋಕಾಯುಕ್ತ ಎಸ್ಪಿ ಎಂ.ಬಿ. ನಂದಗಾಂವಿ ನೇತೃತ್ವದ ತಂಡ ಅತ್ಯಂತ ಚಾಕಚಕ್ಯತೆಯಿಂದ ಈ ದಾಳಿ ನಡೆಸುವ ಮೂಲಕ ಭ್ರಷ್ಟರಿಗೆ ಎಚ್ಚರಿಕೆ ನೀಡಿದೆ. ಆದರೆ ಇಲ್ಲಿ ಕೇಳಿಬರುವ ಪ್ರಶ್ನೆಗಳೆಂದರೆ:

  •  ಜನಸ್ನೇಹಿ ಪೊಲೀಸ್ ವ್ಯವಸ್ಥೆ ಎಲ್ಲಿಗೆ ಸಾಗಿದೆ?
  • ಠಾಣೆಗಳಿಗೆ ಬರುವ ಬಡ ಅಮಾಯಕರ ಸ್ಥಿತಿ ಏನು?
  • ಅಧಿಕಾರವೇ ಹಣ ಮಾಡುವ ಸಾಧನವೇ?

ಕೇವಲ ಒಬ್ಬ ಅಧಿಕಾರಿಯನ್ನು ಹಿಡಿದರೆ ಭ್ರಷ್ಟಾಚಾರ ನಿರ್ಮೂಲನೆಯಾಗುವುದಿಲ್ಲ. ಬದಲಿಗೆ, ಅಧಿಕಾರಿಗಳಲ್ಲಿ ಕರ್ತವ್ಯ ಪ್ರಜ್ಞೆ ಮತ್ತು ಇಲಾಖೆಯೊಳಗೆ ಕಟ್ಟುನಿಟ್ಟಿನ ಆಂತರಿಕ ಮೇಲ್ವಿಚಾರಣೆ ಇರಬೇಕಾದುದು ಇಂದಿನ ತುರ್ತು ಅಗತ್ಯ.

ಇದನ್ನೂ ಓದಿ: Dharwad: ಕಲಬುರ್ಗಿ ಸಾವಿಗೆ ಮೌನ, ರೌಡಿ ಶೀಟರ್‌ ಕೊಲೆ ಕೇಸ್‌ಗೆ ಬಿಜೆಪಿಯಿಂದ ಫಂಡಿಂಗ್? ಇದು ನ್ಯಾಯವೋ ಅಥವಾ ವಿನಯ್ ಕುಲಕರ್ಣಿ ವಿರುದ್ಧದ ಸ್ಕ್ರಿಪ್ಟೆಡ್ ಸಂಚೋ?

ಕಪ್ಪು ಚುಕ್ಕೆಯನ್ನೊರೆಸುವ ಕಾಲ

ಕೆರೂರ ಘಟನೆಯು ಎಲ್ಲ ಭ್ರಷ್ಟ ಅಧಿಕಾರಿಗಳಿಗೆ ಒಂದು ದೊಡ್ಡ ಪಾಠ. ಕಾನೂನು ರಕ್ಷಕರೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದಾಗ ಜನಸಾಮಾನ್ಯರು ಲೋಕಾಯುಕ್ತದಂತಹ ಸಂಸ್ಥೆಗಳನ್ನು ಅನಿವಾರ್ಯವಾಗಿ ಆಶ್ರಯಿಸಬೇಕಾಗುತ್ತದೆ. ಭ್ರಷ್ಟ ‘ಕ್ರಿಮಿ’ಗಳನ್ನು ಮಟ್ಟ ಹಾಕುವ ಕಾರ್ಯ ಹೀಗೆಯೇ ನಿರಂತರವಾಗಿರಲಿ. ಖಾಕಿ ಎನ್ನುವುದು ದರ್ಪದ ಸಂಕೇತವಾಗದೆ, ಸಮಾಜದ ದೀನದಲಿತರ ಭರವಸೆಯ ಬೆಳಕಾಗಲಿ ಎನ್ನುವುದೇ ಈ ಭಾಗದ ಜನರ ಆಶಯ.

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments