ತಮಿಳುನಾಡಿನ ರಾಜಕೀಯ ರಂಗದಲ್ಲಿ ಸದ್ಯ ಕೇಳಿಬರುತ್ತಿರುವ ಅತಿ ದೊಡ್ಡ ಸದ್ದು ಎಂದರೆ ಅದು ಕೆ. ಅಣ್ಣಾಮಲೈ (Annamalai) ಅವರ ಬಂಡಾಯದ ಹೆಜ್ಜೆ. ಕರ್ನಾಟಕದಲ್ಲಿ ಖಾಕಿ ತೊಟ್ಟು ಅಬ್ಬರಿಸಿದ್ದ ‘ಸಿಂಗಂ’ ಅಣ್ಣಾಮಲೈ, ಐಪಿಎಸ್ ಹುದ್ದೆಯ ಗತ್ತನ್ನು ಬಿಟ್ಟು ರಾಜಕೀಯದ ಕೆಸರಿಗೆ ಇಳಿದಾಗ ಇಡೀ ದೇಶವೇ ಕುತೂಹಲದಿಂದ ನೋಡಿತ್ತು. ಆದರೆ, ಇಂದು ಅದೇ ಅಣ್ಣಾಮಲೈ ದೆಹಲಿಯ ಹೈಕಮಾಂಡ್ ಬಾಗಿಲಿಗೆ ಹೋಗಿ ನಿಂತಿದ್ದಾರೆ. ಇತ್ತ ತಮಿಳುನಾಡಿನಲ್ಲಿ ಅವರ ಬೆಂಬಲಿಗರು ಫೇಸ್ಬುಕ್, ಎಕ್ಸ್ (ಟ್ವಿಟರ್) ಖಾತೆಗಳಲ್ಲಿ “ಬಿಜೆಪಿಗೆ ಗುಡ್ಬೈ ಹೇಳಿ, ಹೊಸ ಪಕ್ಷ ಕಟ್ಟಿ” ಎಂದು ಬಹಿರಂಗವಾಗಿ ಆಕ್ರೋಶ ಹೊರಹಾಕುತ್ತಿದ್ದಾರೆ.
ರಾಷ್ಟ್ರೀಯತೆಯ ಜಪ ಮಾಡುವ ಬಿಜೆಪಿ, ತಮಿಳುನಾಡಿನಲ್ಲಿ ತನ್ನ ಕಾಲೂ ರೂಪಿಸಿಕೊಳ್ಳಲು ಅಣ್ಣಾಮಲೈ ಎಂಬ ಯುವ ನಾಯಕನನ್ನು ಹೇಗೆ ‘ಬಲಿಪಶು’ ಮಾಡಿತು? ಅವರ ಕಠಿಣ ಶ್ರಮಕ್ಕೆ ಸಿಕ್ಕ ಪ್ರತಿಫಲವೇನು?
ಖಾಕಿಯ ಗತ್ತು ಬಿಟ್ಟು ಕಮಲ ಹಿಡಿದಿದ್ದ ‘ಹೀರೋ’
ಕೋಟಿ ಕೋಟಿ ಸಂಬಳ ತರುವ ಕಾರ್ಪೊರೇಟ್ ಉದ್ಯೋಗ ಬೇಡವೆಂದು ಯುಪಿಎಸ್ಸಿ ಪಾಸ್ ಮಾಡಿ ಬಂದಿದ್ದ ಕೆ. ಅಣ್ಣಾಮಲೈ (Annamalai), ಕರ್ನಾಟಕದಲ್ಲಿ ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ್ದರು. ರೌಡಿಗಳಿಗೆ, ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಅವರು 2019 ರಲ್ಲಿ ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದಾಗ ಜನ ದಂಗಾಗಿದ್ದರು. 2020 ರಲ್ಲಿ ದೇಶಪ್ರೇಮ, ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆ ನಂಬಿ ಅವರು ಬಿಜೆಪಿ ಸೇರಿದರು.
ಅಣ್ಣಾಮಲೈ ಪಕ್ಷ ಸೇರಿದ ಕೇವಲ ಒಂದೇ ವರ್ಷದಲ್ಲಿ ಹೈಕಮಾಂಡ್ ಅವರಿಗೆ ತಮಿಳುನಾಡು ಬಿಜೆಪಿಯ ಅಧ್ಯಕ್ಷ ಪಟ್ಟ ಕಟ್ಟಿತು. ಅದಕ್ಕೆ ಕಾರಣ ಅಣ್ಣಾಮಲೈ ಮೇಲಿನ ಪ್ರೀತಿಯಲ್ಲ, ಬದಲಿಗೆ ದ್ರಾವಿಡ ಸಿದ್ಧಾಂತದ ಭದ್ರಕೋಟೆಯಾಗಿದ್ದ ತಮಿಳುನಾಡಿನಲ್ಲಿ ಬಿಜೆಪಿಗೆ ಒಬ್ಬರೇ ಒಬ್ಬ ಸಮರ್ಥ ಮುಖ ಇರಲಿಲ್ಲ. ಅಣ್ಣಾಮಲೈ ಎಂಬ ಕ್ಲೀನ್ ಇಮೇಜ್ನ, ವಿದ್ಯಾವಂತ ಯುವಕನನ್ನು ಮುಂದಿಟ್ಟುಕೊಂಡು ತಮಿಳುನಾಡಿನಲ್ಲಿ ಕಮಲ ಅರಳಿಸಬಹುದು ಎಂಬುದು ದೆಹಲಿ ನಾಯಕರ ಲೆಕ್ಕಾಚಾರವಾಗಿತ್ತು.
ರಕ್ತ ಹರಿಸಿದ ಅಣ್ಣಾಮಲೈ, ರಾಜಕೀಯ ಲಾಭ ಹುಡುಕಿದ ಹೈಕಮಾಂಡ್!
ಅಧ್ಯಕ್ಷರಾದ ತಕ್ಷಣ ಕೆ. ಅಣ್ಣಾಮಲೈ (Annamalai) ಎಸಿ ರೂಮಿನಲ್ಲಿ ಕೂತು ರಾಜಕಾರಣ ಮಾಡಲಿಲ್ಲ. ‘ಎನ್ ಮಣ್, ಎನ್ ಮಕ್ಕಳ್’ (ನನ್ನ ಮಣ್ಣು, ನನ್ನ ಜನ) ಪಾದಯಾತ್ರೆಯ ಮೂಲಕ ತಮಿಳುನಾಡಿನ ಮೂಲೆ ಮೂಲೆಗೂ ನಡೆದು ಹೋದರು. ಅಲ್ಲಿಯವರೆಗೆ ತಮಿಳುನಾಡಿನಲ್ಲಿ ಬಿಜೆಪಿ ಎಂದರೆ “ಹಿಂದಿ ಹೇರಿಕೆಯ ಪಕ್ಷ”, “ಮೇಲ್ವರ್ಗದ ಪಕ್ಷ” ಎಂಬ ಹಣೆಪಟ್ಟಿ ಇತ್ತು. ಅದನ್ನು ಅಳಿಸಿ ಹಾಕಿ, ಆಡಳಿತಾರೂಢ ಡಿಎಂಕೆ (DMK) ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಸಿಡಿದು ನಿಂತ ಏಕೈಕ ನಾಯಕ ಅಣ್ಣಾಮಲೈ.
ಅಣ್ಣಾಮಲೈ ಹೋರಾಟ ಎಷ್ಟು ಪ್ರಖರವಾಗಿತ್ತೆಂದರೆ, ಅಲ್ಲಿನ ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ (AIADMK) ಗಿಂತಲೂ ಹೆಚ್ಚಾಗಿ ಬಿಜೆಪಿಯೇ ಜನರ ಕಣ್ಣಿಗೆ ಪ್ರಬಲ ಪ್ರತಿಪಕ್ಷವಾಗಿ ಕಾಣ ತೊಡಗಿತು. ಆದರೆ, ಈ ಕಠಿಣ ಶ್ರಮಕ್ಕೆ ದೆಹಲಿಯ ಬಿಜೆಪಿ ವರಿಷ್ಠರು ನೀಡಿದ ಬಹುಮಾನವೇನು?
ಬೆನ್ನಿಗೆ ಇರಿದರೇ ದೆಹಲಿ ದೊರೆಗಳು? ನಿರ್ಲಕ್ಷ್ಯದ ಪರಾಕಾಷ್ಠೆ
ಅಣ್ಣಾಮಲೈ ಅವರ ಸ್ಪಷ್ಟ ನಿಲುವೇನೆಂದರೆ—“ತಮಿಳುನಾಡಿನಲ್ಲಿ ಬಿಜೆಪಿ ಸ್ವಾವಲಂಬಿಯಾಗಿ ಬೆಳೆಯಬೇಕು, ಭ್ರಷ್ಟ ದ್ರಾವಿಡ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಬಾರದು.” ಆದರೆ, ದೆಹಲಿಯಲ್ಲಿ ಕುಳಿತಿರುವ ಬಿಜೆಪಿ ಚಾಣಕ್ಯರಿಗೆ ತಮಿಳುನಾಡಿನಲ್ಲಿ ಪಕ್ಷವನ್ನು ತಳಮಟ್ಟದಿಂದ ಬೆಳೆಸುವ ತಾಳ್ಮೆ ಇರಲಿಲ್ಲ. ಅವರಿಗೆ ಬೇಕಾಗಿದ್ದು ಕೇವಲ ಲೋಕಸಭೆಯ ಕೆಲವು ಸೀಟುಗಳು ಮಾತ್ರ!
ಇದೇ ಕಾರಣಕ್ಕೆ ಅಣ್ಣಾಮಲೈ ಅವರ ಆಶಯಕ್ಕೆ ವಿರುದ್ಧವಾಗಿ, ಬಿಜೆಪಿ ಹೈಕಮಾಂಡ್ ಮತ್ತೆ ಎಐಎಡಿಎಂಕೆ (AIADMK) ಜೊತೆ ರಹಸ್ಯ ಮೈತ್ರಿಗೆ ಕೈ ಚಾಚಿತು. ಇಷ್ಟೇ ಆಗಿದ್ದರೆ ಸಾಕಿತ್ತು, ಆದರೆ ಎಐಎಡಿಎಂಕೆ ಪಕ್ಷವು “ಮೈತ್ರಿ ಬೇಕಾದರೆ ಅಣ್ಣಾಮಲೈ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು” ಎಂಬ ಶರತ್ತು ವಿಧಿಸಿದಾಗ, ಹೈಕಮಾಂಡ್ ಕಿಂಚಿತ್ತೂ ಯೋಚಿಸದೆ ತನ್ನದೇ ಪಕ್ಷದ ನಿಷ್ಠಾವಂತ ನಾಯಕನಿಗೆ ವಂಚಿಸಿ, ಅವರನ್ನು ಹುದ್ದೆಯಿಂದ ಕಿತ್ತೊಗೆಯಿತು!
ಒಬ್ಬ ಮಾಜಿ ಐಪಿಎಸ್ ಅಧಿಕಾರಿಗೆ, ರಾಜ್ಯದಲ್ಲಿ ಪಕ್ಷವನ್ನು ಶೂನ್ಯದಿಂದ ಇಂದಿನ ಮಟ್ಟಕ್ಕೆ ತಂದು ನಿಲ್ಲಿಸಿದ ನಾಯಕನಿಗೆ ಇದಕ್ಕಿಂತ ದೊಡ್ಡ ಅವಮಾನ ಮತ್ತೊಂದಿರಲು ಸಾಧ್ಯವೇ?
ರಾಜ್ಯಸಭೆಯ ‘ಲಾಲೂಚು’ ಮತ್ತು ಅಣ್ಣಾಮಲೈ ಸ್ವಾಭಿಮಾನ
ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಅಣ್ಣಾಮಲೈ ಬಂಡೇಳಬಹುದು ಎಂದು ಹೆದರಿದ ಬಿಜೆಪಿ ಹೈಕಮಾಂಡ್, ಅವರಿಗೆ ದೆಹಲಿಯಲ್ಲಿ ‘ರಾಜ್ಯಸಭಾ ಎಂಪಿ’ ಸ್ಥಾನ ನೀಡುವ ಆಮಿಷ ಒಡ್ಡಿತು. ಅಂದರೆ, ತಮಿಳುನಾಡು ರಾಜಕಾರಣದಿಂದ ಅಣ್ಣಾಮಲೈ ಅವರನ್ನು ದೂರ ಇಟ್ಟು, ದೆಹಲಿಯಲ್ಲಿ ಮೂಲೆಗುಂಪು ಮಾಡುವುದು ಇದರ ಹಿಂದಿನ ತಂತ್ರವಾಗಿತ್ತು.
ಆದರೆ, ರಾಜಕೀಯ ಲಾಭಕ್ಕಾಗಿ ತತ್ವ ಸಿದ್ಧಾಂತಗಳನ್ನು ಮಾರಿಕೊಳ್ಳದ ಅಣ್ಣಾಮಲೈ, ಆ ರಾಜ್ಯಸಭಾ ಆಫರ್ ಅನ್ನು ಮುಖಕ್ಕೆ ಹೊಡೆದಂತೆ ತಿರಸ್ಕರಿಸಿದ್ದಾರೆ. ತಳಮಟ್ಟದಲ್ಲಿ ಜನರಿಗಾಗಿ ಹೋರಾಡುವ ನಾಯಕನಿಗೆ ದೆಹಲಿಯ ಎಸಿ ಕೋಣೆಯ ಸಂಸತ್ ಸ್ಥಾನ ಎಂದಿಗೂ ಗೌರವ ತರಲಾರದು ಎಂಬುದು ಅವರ ನಿಲುವಾಗಿತ್ತು.
ಇದನ್ನೂ ಓದಿ: KPCC ಪೀಠಕ್ಕೆ ಬಿಗ್ ಫೈಟ್! ಜಾರಕಿಹೊಳಿಗೆ ಸಿದ್ದು ಚೆಕ್ಮೇಟ್? ಈ ಮೂವರಲ್ಲಿ ಯಾರಿಗೆ ಪಟ್ಟ?
ಬೆಂಬಲಿಗರ ಆಕ್ರೋಶ ಮತ್ತು ಮುಂದಿನ ನಡೆ
ಬಿಜೆಪಿ ಮಾಡಿದ ಈ ದ್ರೋಹ ಇಡೀ ತಮಿಳುನಾಡಿನ ಯುವ ಜನತೆಗೆ ಮತ್ತು ಅಣ್ಣಾಮಲೈ ಬೆಂಬಲಿಗರಿಗೆ ತೀವ್ರ ಆಘಾತ ನೀಡಿದೆ. ಅದಕ್ಕಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಈಗ ತಮಿಳುನಾಡು ಬಿಜೆಪಿಯ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. “ನಿಮ್ಮ ಪ್ರಾಮಾಣಿಕತೆಗೆ ಇಲ್ಲಿ ಬೆಲೆಯಿಲ್ಲ, ಬೆನ್ನಿಗೆ ಇರಿಯುವವರ ಜೊತೆ ಇರಬೇಡಿ” ಎಂದು ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ.
ಸದ್ಯ ಅಣ್ಣಾಮಲೈ ದೆಹಲಿಯಲ್ಲಿದ್ದಾರೆ. ಇದು ಹೈಕಮಾಂಡ್ ಜೊತೆಗಿನ ಅವರ ಅಂತಿಮ ಮುಖಾಮುಖಿ.
- ಒಂದು ವೇಳೆ ಹೈಕಮಾಂಡ್ ತನ್ನ ತಪ್ಪು ಒಪ್ಪಿಕೊಂಡು ಅವರಿಗೆ ತಮಿಳುನಾಡಿನಲ್ಲಿ ಸಂಪೂರ್ಣ ಅಧಿಕಾರ ನೀಡದಿದ್ದರೆ, ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ನೀಡುವುದು ನೂರಕ್ಕೆ ನೂರು ನಿಶ್ಚಿತ.
- ಅವರು ಸ್ವಂತ ಪಕ್ಷ ಕಟ್ಟಿದರೆ, ತಮಿಳುನಾಡಿನ ದ್ರಾವಿಡ ರಾಜಕಾರಣದ ಇತಿಹಾಸದಲ್ಲಿ ಮೂರನೇ ಪ್ರಬಲ ಶಕ್ತಿಯಾಗಿ ಅವರು ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ.
ರಾಜಕೀಯದಲ್ಲಿ ನೈತಿಕತೆ, ಪ್ರಾಮಾಣಿಕತೆ ಮತ್ತು ಸ್ವಾವಲಂಬನೆಗೆ ಬೆಲೆ ಇಲ್ಲ ಎಂಬುದನ್ನು ಬಿಜೆಪಿ ಮತ್ತೊಮ್ಮೆ ಸಾಬೀತುಪಡಿಸಿದೆ. ಆದರೆ, ಅಣ್ಣಾಮಲೈ ಸೈಲೆಂಟ್ ಆಗಿ ಕೂರುವ ವ್ಯಕ್ತಿಯಲ್ಲ. ಐಪಿಎಸ್ ಹುದ್ದೆಯನ್ನೇ ತೃಣೀಕರಿಸಿ ಬಂದ ನಾಯಕನಿಗೆ ರಾಜಕೀಯದ ಸ್ಥಾನಮಾನಗಳು ದೊಡ್ಡದಲ್ಲ. ದೆಹಲಿಯ ದೊರೆಗಳ ಚಾಣಕ್ಯ ನೀತಿಗೆ ‘ಸಿಂಗಂ’ ತನ್ನದೇ ಶೈಲಿಯಲ್ಲಿ ಉತ್ತರಿಸುವ ದಿನಗಳು ದೂರವಿಲ್ಲ!

