Homeವಿಶ್ಲೇಷಣೆSuresh Kumar: ಸೌಮ್ಯತೆಯ ಮುಖವಾಡ ಕಳಚಿತು: ಫೇಕ್ ನ್ಯೂಸ್ ಹರಡಿ ಅಸಲಿ ಬಣ್ಣ ಬಯಲು ಮಾಡಿಕೊಂಡ...

Suresh Kumar: ಸೌಮ್ಯತೆಯ ಮುಖವಾಡ ಕಳಚಿತು: ಫೇಕ್ ನ್ಯೂಸ್ ಹರಡಿ ಅಸಲಿ ಬಣ್ಣ ಬಯಲು ಮಾಡಿಕೊಂಡ ‘ಸರಳ’ ಸುರೇಶ್ ಕುಮಾರ್!

ಕರ್ನಾಟಕ ರಾಜಕಾರಣದಲ್ಲಿ ‘ಸರಳ ಸಜ್ಜಣಿಕೆಯ ರಾಜಕಾರಣಿ’ ಎಂಬ ಹಣೆಪಟ್ಟಿ ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಬಿಜೆಪಿಯ ಹಿರಿಯ ನಾಯಕ ಎಸ್. ಸುರೇಶ್ ಕುಮಾರ್ (Suresh Kumar) ಅವರಿಗೆ ಮಾಧ್ಯಮಗಳು ಬಹಳ ಮುತುವರ್ಜಿಯಿಂದ ಇಂತಹದೊಂದು ಬ್ರ್ಯಾಂಡ್ ಸೃಷ್ಟಿಸಿಕೊಟ್ಟಿವೆ. ಸೈಕಲ್ ತುಳಿಯುವುದು, ಕಾಫಿ ಹೋಟೆಲ್‌ನಲ್ಲಿ ಸಾಮಾನ್ಯರಂತೆ ಕೂರುವುದು, ಟ್ರಾಫಿಕ್ ಪೊಲೀಸ್ ಆಗಿ ರಸ್ತೆಯಲ್ಲಿ ನಿಲ್ಲುವುದು—ಹೀಗೆ ಹತ್ತಾರು ‘ಸರಳ’ ಪೋಸುಗಳ ಮೂಲಕ ಸಾರ್ವಜನಿಕ ವಲಯದಲ್ಲಿ ತಾವೊಬ್ಬ ಅಜಾತಶತ್ರು ಎಂಬಂತೆ ಬಿಂಬಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಆದರೆ, ಈ ಎಲ್ಲ ಸಭ್ಯತೆಯ ಮುಖವಾಡದ ಹಿಂದೆ ಅಡಗಿರುವುದು ತೀರಾ ಕೆಳಮಟ್ಟದ ಟ್ರೋಲ್ ತಂತ್ರಗಾರಿಕೆ ಮತ್ತು ನಕಲಿ ಸುದ್ದಿಗಳ (Fake News) ಪ್ರಚಾರಕನ ಅಸಲಿ ಮುಖ ಎಂಬುದು ಈಗ ಸಾಬೀತಾಗಿದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಯೊಂದನ್ನು ಹಂಚಿಕೊಳ್ಳುವ ಮೂಲಕ ಸುರೇಶ್ ಕುಮಾರ್ ಅವರು ತಾವೂ ಕೂಡ ಬಿಜೆಪಿಯ ವಾಟ್ಸಾಪ್ ಯೂನಿವರ್ಸಿಟಿಯ ಒಬ್ಬ ನಿಷ್ಠಾವಂತ ವಿದ್ಯಾರ್ಥಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ರಾಜಕೀಯವಾಗಿ ಎದುರಾಳಿಗಳನ್ನು ಸೈದ್ಧಾಂತಿಕವಾಗಿ ಎದುರಿಸಲು ಸಾಧ್ಯವಾಗದಿದ್ದಾಗ, ಫೇಕ್ ನ್ಯೂಸ್ ಹಾಗೂ ತಿರುಚಿದ ಮಾಹಿತಿಗಳ ಮೊರೆ ಹೋಗುವುದು ಬಿಜೆಪಿಯ ಐಟಿ ಸೆಲ್‌ನ ಹಳೇ ಚಾಳಿ. ಆದರೆ, ತಾವೊಬ್ಬ ಹಿರಿಯ ನಾಯಕ, ವಿದ್ಯಾವಂತ, ಸಚಿವರಾಗಿ ಕೆಲಸ ಮಾಡಿದ ಜವಾಬ್ದಾರಿಯುತ ವ್ಯಕ್ತಿ ಎಂಬುದನ್ನೂ ಮರೆತು ಸುರೇಶ್ ಕುಮಾರ್ ಅವರು ಇಂತಹದ್ದೇ ಒಂದು ಸುಳ್ಳು ಸುದ್ದಿಯನ್ನು ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿರುವುದು ಅವರ ಬ್ರ್ಯಾಂಡ್‌ನ ಅಸಲಿ ಬಣ್ಣವನ್ನು ಬಯಲು ಮಾಡಿದೆ.

ಇದನ್ನೂ ಓದಿ: Digital war: ‘ಕಾಕ್ರೋಚ್ ಪಾರ್ಟಿ’ ಫಾಲೋವರ್ಸ್ ಸಂಖ್ಯೆ ಕಂಡು ಕಂಗೆಟ್ಟ BJP ಐಟಿ ಸೆಲ್! ಶುರುವಾಯ್ತು ಅನ್‌ಫಾಲೋ ಆಂದೋಲನ!

ವ್ಯಂಗ್ಯಚಿತ್ರಕ್ಕೂ ಹೆದರಿ ‘ಪಾಕಿಸ್ತಾನ್’ ಅಸ್ತ್ರ ಬಳಸಿದ ಸಜ್ಜಣಿಕೆಯ ನಾಯಕ!

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿ, ಮಿಲಿಯನ್‌ಗಟ್ಟಲೆ ಫಾಲೋವರ್ಸ್ ಗಳಿಸಿ ದೇಶಾದ್ಯಂತ ಸದ್ದು ಮಾಡುತ್ತಿರುವ ಡಿಜಿಟಲ್ ಆಂದೋಲನ ‘ಕಾಕ್ರೋಚ್ ಜನತಾ ಪಾರ್ಟಿ’ (CJP). ಈ ಪೇಜ್‌ನ ಜನಪ್ರಿಯತೆ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಸ್ವತಃ ಬಿಜೆಪಿಯ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಫಾಲೋವರ್ಸ್ ಸಂಖ್ಯೆಯನ್ನೇ ಮೀರಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಡಿಜಿಟಲ್ ವ್ಯಂಗ್ಯವನ್ನು ಸೌಜನ್ಯದಿಂದ ಸ್ವೀಕರಿಸುವ ಅಥವಾ ಸೈದ್ಧಾಂತಿಕವಾಗಿ ಎದುರಿಸುವ ತಾಕತ್ತು ಇಲ್ಲದ ಬಿಜೆಪಿ ಐಟಿ ಸೆಲ್, ತಕ್ಷಣವೇ ತನ್ನ ಎಂದಿನ ಹಳೇ ಅಸ್ತ್ರವಾದ ‘ಪಾಕಿಸ್ತಾನ್ ಶೇಡ್’ ಅನ್ನು ಹೊರತೆಗೆದಿದೆ. ದುರಂತವೆಂದರೆ, ಈ ಸುಳ್ಳು ಅಸ್ತ್ರಕ್ಕೆ ಹೆಗಲು ಕೊಟ್ಟಿರುವುದು ಇದೇ ಸರಳತೆಯ ಸಾಕಾರ ಮೂರ್ತಿ ಸುರೇಶ್ ಕುಮಾರ್ (Suresh Kumar)!

ಶಾಸಕ ಸುರೇಶ್ ಕುಮಾರ್ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಎಡಿಟ್ ಮಾಡಿದ ನಕಲಿ ಗ್ರಾಫಿಕ್ ಚಿತ್ರವೊಂದನ್ನು ಹಂಚಿಕೊಂಡು, ಅದಕ್ಕೆ ಅತ್ಯಂತ ದ್ವೇಷಪೂರಿತವಾದ ಸಾಲುಗಳನ್ನು ಬರೆದುಕೊಂಡಿದ್ದಾರೆ. “ಜಿರಳೆ ಜಂತಾ ಪಾರ್ಟಿ (Cockroach Janta Party)ಯ ಬೆಂಬಲಿಗರ profile ಹೀಗಿದೆ. ಯಾವ ಯಾವ ದೇಶದವರ ಶೇಕಡವಾರು ಸಂಖ್ಯೆ ಗಮನಿಸಿ, ಹುನ್ನಾರ ಅರ್ಥ ಆಗುತ್ತಿದೆ” ಎಂದು ಬರೆಯುವ ಮೂಲಕ ತಾವೊಬ್ಬ ಜವಾಬ್ದಾರಿಯುತ ಶಾಸಕ ಎಂಬುದನ್ನೂ ಮರೆತು ಸಾರ್ವಜನಿಕರಲ್ಲಿ ವಿಷ ಬಿತ್ತಲು ಹೊರಟಿದ್ದಾರೆ. ಅವರು ಹಂಚಿಕೊಂಡ ಆ ನಕಲಿ ಗ್ರಾಫಿಕ್‌ನಲ್ಲಿ, ಕಾಕ್ರೋಚ್ ಜನತಾ ಪಾರ್ಟಿಯನ್ನು ಬೆಂಬಲಿಸುವವರಲ್ಲಿ ಬರೋಬ್ಬರಿ ಶೇ. 49 ರಷ್ಟು ಜನ ಪಾಕಿಸ್ತಾನದವರು, ಇನ್ನುಳಿದಂತೆ ಅಮೆರಿಕ ಮತ್ತು ಬಾಂಗ್ಲಾದೇಶದಿಂದ ತಲಾ ಶೇ. 14 ರಷ್ಟು ಜನರಿದ್ದು, ಭಾರತದಿಂದ ಕೇವಲ ಶೇ. 9 ರಷ್ಟು ಫಾಲೋವರ್ಸ್ ಮಾತ್ರ ಇದ್ದಾರೆ ಎನ್ನುವ ಹಸಿ ಹಸಿ ಸುಳ್ಳಿನ ಅಂಕಿ-ಅಂಶಗಳಿದ್ದವು. ಅಂದರೆ, ಬಿಜೆಪಿಯನ್ನು ಟೀಕಿಸುವ ಅಥವಾ ವ್ಯಂಗ್ಯ ಮಾಡುವವರೆಲ್ಲರೂ ವಿದೇಶಿಗರು, ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನದವರು ಎಂದು ಬಿಂಬಿಸಿ ಸಾರ್ವಜನಿಕರನ್ನು ದಾರಿ ತಪ್ಪಿಸುವ ಹತಾಶ ಪ್ರಯತ್ನವನ್ನು ಈ ಹಿರಿಯ ನಾಯಕ ಮಾಡಿದ್ದಾರೆ!

ಮಖಾಡೆ ಮಲಗಿದ ಐಟಿ ಸೆಲ್ ಹುನ್ನಾರ: ಸುರೇಶ್ ಕುಮಾರ್‌ಗೆ ಕಪಾಳಮೋಕ್ಷ ಮಾಡಿದ ಅಸಲಿ ಡೇಟಾ!

ಇನ್‌ಸ್ಟಾಗ್ರಾಂ ಇನ್‌ಸೈಟ್ಸ್ (Instagram Insights) ಅಥವಾ ಮೆಟಾ ಅನಾಲಿಟಿಕ್ಸ್‌ನ ಅಧಿಕೃತ ಮಾಹಿತಿಗಳು ಕೇವಲ ಆಯಾ ಪೇಜ್‌ನ ನಿರ್ವಾಹಕರಿಗೆ ಮಾತ್ರ ಕಾಣಿಸುತ್ತವೆಯೇ ಹೊರತು ಹೊರಗಿನವರಿಗಲ್ಲ ಎಂಬ ಕನಿಷ್ಠ ತಾಂತ್ರಿಕ ಜ್ಞಾನವೂ ಇಲ್ಲದಂತೆ ಸುರೇಶ್ ಕುಮಾರ್ ಈ ಫೇಕ್ ಚಾರ್ಟ್ ಅನ್ನು ಶೇರ್ ಮಾಡಿ ನಗೆಪಾಟಲಿಗೀಡಾಗಿದ್ದಾರೆ. ಕೊನೆಗೆ ಸ್ವತಃ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಮತ್ತು ಯುವ ಆಕ್ಟಿವಿಸ್ಟ್ ಅಭಿಜೀತ್ ದೀಪ್ಕೆ ಅವರು ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ನೇರವಾಗಿ ಸುರೇಶ್ ಕುಮಾರ್ ಮತ್ತು ಬಿಜೆಪಿ ಐಟಿ ಸೆಲ್‌ನ ಬೆನ್ನಲುಬು ಮುರಿಯುವಂತಹ ಅಸಲಿ ದಾಖಲೆಯನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ.

ಸುರೇಶ್ ಕುಮಾರ್ ಅವರ ಸುಳ್ಳನ್ನು ಬೆತ್ತಲು ಮಾಡಿದ ಅಭಿಜೀತ್ ದೀಪ್ಕೆ, “ನೀವು ನಮ್ಮ ಖಾತೆಯನ್ನು ಹ್ಯಾಕ್ ಮಾಡಲು ಎಷ್ಟು ಹತಾಶರಾಗಿ ಪ್ರಯತ್ನಿಸುತ್ತಿದ್ದೀರಿ ಎಂಬುದು ನನಗೆ ಗೊತ್ತು. ಆದರೆ ನೀವು ಅದರಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದೀರಿ. ಹಾಗಾಗಿ ನಾನೇ ಅಸಲಿ ಡೇಟಾವನ್ನು ಹಂಚಿಕೊಳ್ಳುತ್ತಿದ್ದೇನೆ. ಶೇ. 94 ರಷ್ಟು ಭಾರತೀಯ ಯುವಕರನ್ನು ನೀವು ಯಾವ ಧೈರ್ಯದ ಮೇಲೆ ಪಾಕಿಸ್ತಾನಿಗಳು ಎಂದು ಕರೆಯುತ್ತಿದ್ದೀರಿ?” ಎಂದು ನೇರ ಸವಾಲು ಹಾಕಿದ್ದಾರೆ.

ಅಭಿಜೀತ್ ಬಿಡುಗಡೆ ಮಾಡಿದ ಇನ್‌ಸ್ಟಾಗ್ರಾಂನ ಅಧಿಕೃತ ಅಂಕಿ-ಅಂಶಗಳ ಪುಟವನ್ನು ಗಮನಿಸಿದರೆ ಅಲ್ಲಿ ಇಡೀ ಬಿಜೆಪಿಯ ಸುಳ್ಳಿನ ಕೋಟೆ ಧೂಳೀಪಟವಾಗುತ್ತದೆ. ಏಕೆಂದರೆ, ಸಿಜೆಪಿ ಪೇಜ್ ಹೊಂದಿರುವ ಒಟ್ಟು ಫಾಲೋವರ್ಸ್‌ಗಳಲ್ಲಿ ಬರೋಬ್ಬರಿ ಶೇ. 94.7 ರಷ್ಟು ಜನ ಅಪ್ಪಟ ಭಾರತೀಯ ಯುವಕರು! ಇನ್ನುಳಿದಂತೆ ಯುನೈಟೆಡ್ ಸ್ಟೇಟ್ಸ್‌ನಿಂದ ಶೇ. 1.0, ಯುನೈಟೆಡ್ ಕಿಂಗ್‌ಡಮ್‌ನಿಂದ ಶೇ. 0.7 ಹಾಗೂ ಕೆನಡಾದಿಂದ ಶೇ. 0.6 ರಷ್ಟು ಜನರಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಶೇ. 94 ಕ್ಕೂ ಹೆಚ್ಚು ಭಾರತೀಯರನ್ನು ‘ಪಾಕಿಸ್ತಾನಿಗಳು’ ಎಂದು ಬಿಂಬಿಸಿ ಇಡೀ ದೇಶದ ಯುವಜನತೆಗೆ ದೇಶದ್ರೋಹದ ಹಣೆಪಟ್ಟಿ ಕಟ್ಟಲು ಹೊರಟ ಸುರೇಶ್ ಕುಮಾರ್ ಅವರ ಈ ನಡೆ ರಾಜಕೀಯ ದಿವಾಳಿತನದ ಪರಮಾವಧಿಯಲ್ಲದೆ ಮತ್ತೇನು?

Suresh Kumar: ಸೌಮ್ಯತೆಯ ಮುಖವಾಡ ಕಳಚಿತು: ಫೇಕ್ ನ್ಯೂಸ್ ಹರಡಿ ಅಸಲಿ ಬಣ್ಣ ಬಯಲು ಮಾಡಿಕೊಂಡ ‘ಸರಳ’ ಸುರೇಶ್ ಕುಮಾರ್!
‘ಕಾಕ್ರೋಚ್ ಜನತಾ ಪಾರ್ಟಿ’ಯ ಸಂಸ್ಥಾಪಕ ಮತ್ತು ಯುವ ಆಕ್ಟಿವಿಸ್ಟ್ ಅಭಿಜೀತ್ ದೀಪ್ಕೆ ಅವರ ಎಕ್ಸ್‌ ಪೋಸ್ಟ್

ಸಭ್ಯತೆಯ ಹೆಸರಲ್ಲಿ ಸುಳ್ಳಿನ ವ್ಯಾಪಾರ!

ಯಾರೋ ಅನಾಮಧೇಯರು, ಕಿಡಿಗೇಡಿಗಳು ಫೇಕ್ ನ್ಯೂಸ್ ಹರಡಿದರೆ ಅದಕ್ಕೆ ಒಂದು ಅರ್ಥವಿರುತ್ತದೆ. ಆದರೆ, ಸಾರ್ವಜನಿಕ ಜೀವನದಲ್ಲಿ ದಶಕಗಳ ಅನುಭವವಿರುವ, ಕಾನೂನು ಬಲ್ಲ ಸುರೇಶ್ ಕುಮಾರ್ ಅವರಂತಹ ನಾಯಕರು ತಾವಾಡುವ ಮಾತು ಅಥವಾ ಹಂಚಿಕೊಳ್ಳುವ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸದೆ, ಕೇವಲ ರಾಜಕೀಯ ದ್ವೇಷ ಸಾಧನೆಗಾಗಿ ಭಾರತೀಯರನ್ನು ವಿದೇಶಿಗರು, ಪಾಕಿಸ್ತಾನಿಗಳು ಎಂದು ಬಿಂಬಿಸುವ ಫೇಕ್ ನ್ಯೂಸ್ ಹರಡುವುದು ಎಷ್ಟು ಸರಿ? ಇದು ಕೇವಲ ಆಕಸ್ಮಿಕವಾಗಿ ನಡೆದ ತಪ್ಪಲ್ಲ; ಬದಲಿಗೆ ಎದುರಾಳಿಗಳ ತೇಜೋವಧೆ ಮಾಡಲು ಅಥವಾ ತಮ್ಮ ರಾಜಕೀಯ ಲಾಭಕ್ಕಾಗಿ ವ್ಯವಸ್ಥಿತವಾಗಿ ನಕಲಿ ಅಸ್ತ್ರವನ್ನು ಬಳಸುವ ಹತಾಶ ಪ್ರಯತ್ನ.

ಮಾಧ್ಯಮಗಳು ಇವರನ್ನು “ರಾಜಾಜಿನಗರದ ಗಾಂಧಿ”, “ಸರಳತೆಯ ಸಾಕಾರ ಮೂರ್ತಿ” ಅಂತೆಲ್ಲ ಹೊಗಳಿ ಅಟ್ಟಕ್ಕೇರಿಸುತ್ತವೆ. ಆದರೆ, ಇದೇ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣಗಳಿಗೆ ಬಂದಾಗ ತಮ್ಮ ಸೌಮ್ಯತೆಯನ್ನು ಬದಿಗಿಟ್ಟು, ರಾಜಕೀಯ ದ್ವೇಷದ ವಿಷವನ್ನು ಕಾರುವ ಸುಳ್ಳು ಸುದ್ದಿಗಳನ್ನು ಶೇರ್ ಮಾಡುತ್ತಾರೆ. ಈ ಮೂಲಕ ಸೈಬರ್ ಲೋಕದ ಸಾಮಾನ್ಯ ಟ್ರೋಲರ್‌ಗಳಿಗೂ ತಮಗೂ ಯಾವುದೇ ವ್ಯತ್ಯಾಸವಿಲ್ಲ ಎಂಬುದನ್ನು ಅವರೇ ತೋರ್ಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Cockroach: ಜಿರಳೆಗೂ ನಡುಗುತ್ತಿದೆಯೇ ಆಡಳಿತ ಪಕ್ಷ? ಡಿಜಿಟಲ್ ಗೂಂಡಾಗಿರಿ ಮೂಲಕ ಸತ್ಯದ ಧ್ವನಿ ಹಿಸುಕುವ ಹೇಡಿತನ!

ಬ್ರ್ಯಾಂಡ್ ಕುಸಿತ, ಮುಖವಾಡ ಸಡಿಲ!

ಸುರೇಶ್ ಕುಮಾರ್ ಅವರ ಈ ನಡೆ ಅವರ ಅಭಿಮಾನಿಗಳಿಗೆ ಹಾಗೂ ಪ್ರಜ್ಞಾವಂತ ನಾಗರಿಕರಿಗೆ ತೀವ್ರ ನಿರಾಶೆ ಮೂಡಿಸಿದೆ. ಸಮಾಜಕ್ಕೆ ಆದರ್ಶಪ್ರಾಯವಾಗಿರಬೇಕಾದ ಶಾಸಕರೊಬ್ಬರು ತಾವೇ ಫೇಕ್ ನ್ಯೂಸ್ ಹರಡುವ ‘ಫ್ಯಾಕ್ಟರಿ’ಯ ಏಜೆಂಟ್ ಆಗಿ ಬದಲಾಗಿರುವುದು ಅತ್ಯಂತ ಖೇದಕರ ಸಂಗತಿ. ನೀವು ಎಷ್ಟೇ ಸರಳವಾಗಿ ಬದುಕಿ, ಎಷ್ಟೇ ಕಿಲೋಮೀಟರ್ ಸೈಕಲ್ ತುಳಿದರೂ, ನಿಮ್ಮ ಆಲೋಚನೆಗಳು ಮತ್ತು ರಾಜಕೀಯ ನಡವಳಿಕೆಗಳು ಕಲುಷಿತವಾಗಿದ್ದರೆ ಆ ‘ಸರಳತೆ’ ಕೇವಲ ಗಿಮಿಕ್ ಆಗಿ ಕಾಣುತ್ತದೆಯೆ ಹೊರತು ಅದಕ್ಕೆ ಯಾವುದೇ ಮೌಲ್ಯವಿರುವುದಿಲ್ಲ.

ಮಾಧ್ಯಮಗಳು ಸೃಷ್ಟಿಸಿದ ‘ಸೌಮ್ಯ ನಾಯಕ’ ಎಂಬ ಮುಖವಾಡದ ನಟ್ಟು-ಬೋಲ್ಟ್‌ಗಳು ಈಗ ಸಂಪೂರ್ಣವಾಗಿ ಸಡಿಲಗೊಂಡಿವೆ. ಫೇಕ್ ನ್ಯೂಸ್ ಹಂಚಿಕೊಂಡು, ಅಸಲಿ ಡೇಟಾ ಹೊರಬಂದು ಜಗತ್ತಿನ ಮುಂದೆ ಬೆತ್ತಲಾದ ಮೇಲಾದರೂ ಈ “ಸಜ್ಜಣಿಕೆಯ ರಾಜಕಾರಣಿ” ತಪ್ಪು ಒಪ್ಪಿಕೊಂಡು ಇಡೀ ದೇಶದ ಯುವಜನತೆಯ ಕ್ಷಮೆ ಕೇಳುವ ಸೌಜನ್ಯ ತೋರುತ್ತಾರಾ? ಅಥವಾ ತಮ್ಮ ಎಂದಿನ ಮೌನದ ಮೂಲಕವೇ ಈ ಸುಳ್ಳನ್ನು ಸಮರ್ಥಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಒಂದು ಮಾತ್ರ ಸತ್ಯ—ಸುರೇಶ್ ಕುಮಾರ್ ಅವರ ‘ಸರಳ ಸಜ್ಜಣಿಕೆ’ಯ ಬ್ರ್ಯಾಂಡ್ ಈಗ ಸುಳ್ಳು ಸುದ್ದಿಯ ಮಸಿ ಬಳಿದುಕೊಂಡು ಮಂಕಾಗಿದೆ!

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments