ಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳ ಉಪಚುನಾವಣೆಯ ಅಖಾಡದಲ್ಲಿ ಈಗ ‘ಗ್ಯಾರಂಟಿ ಸಮರ’ ಶುರುವಾಗಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳ ನಿಧಿ ಬಿಡುಗಡೆಯ ವಿವರ ಕೇಳಿ ಭಾರತದ ಚುನಾವಣಾ ಆಯೋಗ (ECI) ನೋಟಿಸ್ ನೀಡ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಆಯೋಗದ ವಿರುದ್ಧ ಹರಿಹಾಯ್ದಿದ್ದಾರೆ. ಆಯೋಗದ ಈ ನಡವಳಿಕೆಯನ್ನು “ಸಾಂವಿಧಾನಿಕ ಸಂಸ್ಥೆಯ ಇಬ್ಬಗೆಯ ನೀತಿ ಮತ್ತು ರಾಜಕೀಯ ಪ್ರೇರಿತ ಕಿರುಕುಳ” ಎಂದು ಅವರು ಬಹಿರಂಗವಾಗಿ ಕಿಡಿಕಾರಿದ್ದಾರೆ.
ಆಯೋಗದ ‘ಸಂದೇಹಾಸ್ಪದ’ ನಡೆ ಮತ್ತು ಸರ್ಕಾರದ ಪ್ರಶ್ನೆ
ಉಪಚುನಾವಣೆಯ ನೀತಿ ಸಂಹಿತೆಯ ನೆಪವನ್ನೊಡ್ಡಿ ಗ್ಯಾರಂಟಿ ಯೋಜನೆಗಳ ಅನುದಾನದ ಪಾರದರ್ಶಕತೆಯನ್ನು ಪ್ರಶ್ನಿಸಿರುವ ಆಯೋಗದ ಕ್ರಮಕ್ಕೆ ಸಿಎಂ (Siddaramaiah) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಯೋಜನೆಗಳು ಚುನಾವಣಾ ಹೊತ್ತಿನಲ್ಲಿ ಘೋಷಿಸಿದವುಗಳಲ್ಲ, ಬದಲಾಗಿ 2023ರ ವಿಧಾನಸಭಾ ಚುನಾವಣೆಯ ಭರವಸೆಯಂತೆ ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಜಾರಿಯಲ್ಲಿರುವ ಆಡಳಿತಾತ್ಮಕ ಪ್ರಕ್ರಿಯೆಗಳಾಗಿವೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ಮಹಾರಾಷ್ಟ್ರದಲ್ಲಿ ಮೌನ, ಕರ್ನಾಟಕದಲ್ಲಿ ಕ್ಯಾತೆ: ತಾರತಮ್ಯದ ಆರೋಪ
ವರದಿಯ ಪ್ರಮುಖಾಂಶವೆಂದರೆ, ಚುನಾವಣಾ ಆಯೋಗವು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತೋರುತ್ತಿರುವ ‘ಉದಾರತೆ’. ಮುಖ್ಯಮಂತ್ರಿಗಳು ಆಯೋಗದ ಪಕ್ಷಪಾತದ ಧೋರಣೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ:
- ಬಿಜೆಪಿ ರಾಜ್ಯಗಳಿಗೆ ರಿಯಾಯಿತಿ: ಮಹಾರಾಷ್ಟ್ರ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಚುನಾವಣೆಗೂ ಮುನ್ನವೇ ನಗದು ವರ್ಗಾವಣೆ ಯೋಜನೆಗಳನ್ನು ವೇಗಗೊಳಿಸಲಾಗಿತ್ತು. ಮತದಾರರ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತಿದ್ದರೂ ಆಯೋಗವು ಅಂದು ಜಾಣಮೌನ ವಹಿಸಿತ್ತು.
- ಕರ್ನಾಟಕಕ್ಕೆ ಅಡ್ಡಿ: ಆದರೆ ಕರ್ನಾಟಕದಲ್ಲಿ ವರ್ಷದಿಂದ ನಡೆಯುತ್ತಿರುವ ಜನಪರ ಯೋಜನೆಗಳ ಮೇಲೆ ಆಯೋಗವು ಕಣ್ಣಿಟ್ಟಿರುವುದು ಒಂದು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಸಂಚು ಎಂದು ಆರೋಪಿಸಲಾಗಿದೆ.
ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗಳ ಸಂದರ್ಭದಲ್ಲಿ ಭಾರತದ ಚುನಾವಣಾ ಆಯೋಗವು (ECI) ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು, ರಾಜ್ಯದ ಗ್ಯಾರಂಟಿ ಯೋಜನೆಗಳಡಿ ಬಿಡುಗಡೆಯಾದ ನಿಧಿಗಳ ವಿವರಗಳನ್ನು ಕೇಳಿದೆ.
ನಮ್ಮ ಗ್ಯಾರಂಟಿ ಯೋಜನೆಗಳು ಈ ಉಪಚುನಾವಣೆ ಸಮಯದಲ್ಲಿ ಜಾರಿಯಾದವುಗಳಲ್ಲ ಎಂಬುದನ್ನು ಆರಂಭದಲ್ಲೇ… pic.twitter.com/pasA9fqOyA
— Siddaramaiah (@siddaramaiah) April 8, 2026
ಇದು ಬಡವರ ಮತ್ತು ಮಹಿಳೆಯರ ವಿರುದ್ಧದ ದಾಳಿ
“ಗ್ಯಾರಂಟಿ ಯೋಜನೆಗಳನ್ನು ಗುರಿಯಾಗಿಸುವುದು ಕೇವಲ ರಾಜಕೀಯವಲ್ಲ, ಇದು ರಾಜ್ಯದ ಬಡವರು, ಮಹಿಳೆಯರು ಮತ್ತು ಕನ್ನಡಿಗರ ವಿರುದ್ಧದ ಪರೋಕ್ಷ ಯುದ್ಧ” ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ. ಬಿಜೆಪಿಯು ಈ ಹಿಂದೆ ‘ಬಿಟ್ಟಿ ಭಾಗ್ಯ’ ಎಂದು ಟೀಕಿಸಿ, ಈಗ ಅದೇ ಯೋಜನೆಗಳನ್ನು ತನ್ನ ಆಡಳಿತದ ರಾಜ್ಯಗಳಲ್ಲಿ ನಕಲು ಮಾಡುತ್ತಿದೆ. ಈಗ ಆಯೋಗದ ಮೂಲಕ ಈ ಯೋಜನೆಗಳಿಗೆ ಅಡ್ಡಿಪಡಿಸಲು ಸಂಚು ರೂಪಿಸಲಾಗುತ್ತಿದೆ ಎಂಬುದು ಸರ್ಕಾರದ ವಾದ.
ಇದನ್ನೂ ಓದಿ: CC Patil: ಕುರುಬರನ್ನ ‘ಟೂರ್’ ಎಂದ ಸಿಸಿ ಪಾಟೀಲರೇ, ಕಳಂಕಿತ ಸ್ವಾಮಿಯ ಬೆನ್ನಿಗೆ ನಿಂತ ನಿಮಗೆ ಏನೆಂದು ಕರೆಯೋಣ?
ಸಾಂವಿಧಾನಿಕ ಸಂಸ್ಥೆಯ ವಿಶ್ವಾಸಾರ್ಹತೆ ಇಳಿಮುಖ?
ಒಟ್ಟಾರೆಯಾಗಿ, ಸಾಂವಿಧಾನಿಕವಾಗಿ ನಿಷ್ಪಕ್ಷಪಾತವಾಗಿರಬೇಕಾದ ಚುನಾವಣಾ ಆಯೋಗವು ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಿದೆಯೇ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. “ನುಡಿದಂತೆ ನಡೆವ ಸರ್ಕಾರ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ಸರ್ಕಾರವು, ಆಯೋಗದ ಇಂತಹ ಗೊಡ್ಡು ಬೆದರಿಕೆಗಳಿಗೆ ಬಗ್ಗುವುದಿಲ್ಲ ಮತ್ತು ಕನ್ನಡಿಗರಿಗೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ಹಿಂದೆ ಸರಿಯುವುದಿಲ್ಲ ಎಂದು ದೃಢವಾಗಿ ಸಾರಿದೆ.
ಉಪಚುನಾವಣೆಯ ಈ ಸಂದರ್ಭದಲ್ಲಿ ಆಯೋಗದ ‘ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ’ ಎಂಬ ನೀತಿಯು ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇದು ಕಾನೂನು ಸಮರಕ್ಕೆ ದಾರಿ ಮಾಡಿಕೊಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

