ಬೆಂಗಳೂರು: ಕರ್ನಾಟಕದ ಚರ್ಚ್ಗಳಲ್ಲಿ ಕನ್ನಡ ಭಾಷೆಗೆ ಮನ್ನಣೆ ನೀಡಬೇಕು ಮತ್ತು ಸ್ಥಳೀಯ ಸಂಸ್ಕೃತಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಮಾರ್ಚ್ 28ರಂದು ನಗರದ (Bengaluru) ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಅಖಿಲ ಕರ್ನಾಟಕ ಕ್ಯಾಥೋಲಿಕ ಕ್ರೈಸ್ತರ ಕನ್ನಡ ಸಂಘ ಈ ಹೋರಾಟದ ನೇತೃತ್ವ ವಹಿಸಿದ್ದು, ರಾಜ್ಯದ ಚರ್ಚ್ ಆಡಳಿತದಲ್ಲಿ ನಡೆಯುತ್ತಿರುವ ಭಾಷಾ ತಾರತಮ್ಯದ ವಿರುದ್ಧ ಧ್ವನಿ ಎತ್ತಿದೆ.
ದ್ವಿತೀಯ ವಾಟಿಕನ್ ಕೌನ್ಸಿಲ್ ಮಾರ್ಗದರ್ಶನ ಪಾಲನೆಯಾಗಲಿ
ಪ್ರತಿಭಟನೆಯ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಘದ ಪದಾಧಿಕಾರಿಗಳು, ದ್ವಿತೀಯ ವಾಟಿಕನ್ ಕೌನ್ಸಿಲ್ ನೀಡಿರುವ ಸ್ಪಷ್ಟ ಮಾರ್ಗದರ್ಶನದಂತೆ ಚರ್ಚ್ಗಳಲ್ಲಿ ಆಯಾ ಪ್ರಾಂತೀಯ ಅಥವಾ ಸ್ಥಳೀಯ ಭಾಷೆಗಳಿಗೆ ಮೊದಲ ಆದ್ಯತೆ ನೀಡಬೇಕು. ಆದರೆ, ಕರ್ನಾಟಕದ ಚರ್ಚ್ಗಳಲ್ಲಿ ದಶಕಗಳು ಕಳೆದರೂ ಕನ್ನಡದಲ್ಲಿ ನಿಯಮಿತವಾಗಿ ಮತ್ತು ಗೌರವಪೂರ್ಣವಾಗಿ ಪೂಜೆಗಳು (Mass) ನಡೆಯುತ್ತಿಲ್ಲ ಎಂಬುದು ವಿಷಾದನೀಯ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡವನ್ನು ಕೇವಲ ಹೆಸರಿಗಲ್ಲದೆ, ಪೂಜಾ ವಿಧಿವಿಧಾನಗಳಲ್ಲಿ ಸಾಮಾನ್ಯ ‘ವರ್ಣಾಕ್ಯುಲರ್’ ಭಾಷೆಯಾಗಿ ಕಡ್ಡಾಯಗೊಳಿಸಬೇಕು ಎಂಬುದು ಸಂಘದ ಪ್ರಮುಖ ಬೇಡಿಕೆಯಾಗಿದೆ.
ಸೆಂಟ್ ಪೀಟರ್ಸ್ ಪಾಂಟಿಫಿಕಲ್ ಸೆಮಿನರಿ ವಿವಾದ
ಈ ಹೋರಾಟದ ಮತ್ತೊಂದು ಪ್ರಮುಖ ಅಂಶವೆಂದರೆ ಸೆಂಟ್ ಪೀಟರ್ಸ್ ಪಾಂಟಿಫಿಕಲ್ ಸೆಮಿನರಿಯ ಆಡಳಿತಾತ್ಮಕ ವಿಷಯ. 1929ರಲ್ಲಿ ಅಂದಿನ ಮೈಸೂರು ಮಹಾರಾಜರು ಉದಾರ ಮನಸ್ಸಿನಿಂದ ಈ ಸಂಸ್ಥೆಗೆ ಜಮೀನನ್ನು ಅನುದಾನವಾಗಿ ನೀಡಿದ್ದರು. “ಕರ್ನಾಟಕದ ನೆಲದಲ್ಲಿರುವ ಈ ಸಂಸ್ಥೆಯನ್ನು ಪಕ್ಕದ ತಮಿಳುನಾಡು ರಾಜ್ಯದ ಬಿಷಪ್ಗಳು ನಿರ್ವಹಿಸುತ್ತಿರುವುದು ಎಷ್ಟು ಸರಿ?” ಎಂದು ಸಂಘವು ಪ್ರಶ್ನಿಸಿದೆ. ಕರ್ನಾಟಕದ ಆಸ್ತಿಯ ಮೇಲೆ ಹೊರಗಿನವರ ನಿಯಂತ್ರಣವನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ. ಕೂಡಲೇ ಇದರ ಆಡಳಿತವನ್ನು ಕರ್ನಾಟಕದ ಬಿಷಪ್ಗಳಿಗೆ ಹಸ್ತಾಂತರಿಸಬೇಕು ಎಂದು ಐಸಾಕ್ ಆಗ್ರಹಿಸಿದ್ದಾರೆ.
ಸ್ಥಳೀಯ ಪಾದ್ರಿಗಳ ನೇಮಕಾತಿಗೆ ಒತ್ತಾಯ
ಕಳೆದ ಹಲವು ದಶಕಗಳಿಂದ ಕನ್ನಡೇತರ ಗುಂಪುಗಳ ಬಿಷಪ್ಗಳು ಕರ್ನಾಟಕದಲ್ಲಿ ಪ್ರಭಾವಶಾಲಿಯಾಗಿದ್ದಾರೆ. ಇದರಿಂದಾಗಿ ಕನ್ನಡ ಭಾಷೆ, ಸ್ಥಳೀಯ ಸಂಸ್ಕೃತಿ ಮತ್ತು ಕನ್ನಡ ಮಾತನಾಡುವ ಪಾದ್ರಿಗಳನ್ನು ವ್ಯವಸ್ಥಿತವಾಗಿ ಕಡೆಗಣಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. “ಕರ್ನಾಟಕದ ಧರ್ಮಪ್ರಾಂತಗಳಲ್ಲಿ ಸ್ಥಳೀಯ ಪರಿಸ್ಥಿತಿಯನ್ನು ಅರಿತ ಕನ್ನಡ ಪಾದ್ರಿಗಳನ್ನು ಬಿಷಪ್ಗಳಾಗಿ ನೇಮಕ ಮಾಡಬೇಕು. ಸ್ಥಳೀಯ ನಾಯಕತ್ವಕ್ಕೆ ಆದ್ಯತೆ ನೀಡಿದಾಗ ಮಾತ್ರ ಭಾಷಾ ಸಮಸ್ಯೆ ಬಗೆಹರಿಯಲು ಸಾಧ್ಯ,” ಎಂದು ಸಂಘವು ಹೇಳಿದೆ.
ಹೋರಾಟದ ಪ್ರಮುಖ ಬೇಡಿಕೆಗಳು:
- ರಾಜ್ಯದ ಎಲ್ಲಾ ಚರ್ಚ್ಗಳಲ್ಲಿ ಕನ್ನಡ ಭಾಷೆಯಲ್ಲಿಯೇ ಪೂಜೆಗಳು ನಡೆಯಬೇಕು.
- ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಆಡಳಿತ ಕರ್ನಾಟಕದವರ ಕೈಲಿರಬೇಕು.
- ಕರ್ನಾಟಕದ ಧರ್ಮಪ್ರಾಂತಗಳಿಗೆ ಕನ್ನಡ ಮೂಲದ ಬಿಷಪ್ಗಳನ್ನು ನೇಮಿಸಬೇಕು.
ಮಾರ್ಚ್ 28ರಂದು ನಡೆಯಲಿರುವ ಈ ಹೋರಾಟಕ್ಕೆ ರಾಜ್ಯದಾದ್ಯಂತ ಇರುವ ಕನ್ನಡಾಭಿಮಾನಿಗಳು ಮತ್ತು ಕ್ರೈಸ್ತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅಖಿಲ ಕರ್ನಾಟಕ ಕ್ಯಾಥೋಲಿಕ ಕ್ರೈಸ್ತರ ಕನ್ನಡ ಸಂಘ ಮನವಿ ಮಾಡಿದೆ.

