ಬೆಳಗಾವಿ: ಜಿಲ್ಲೆಯ ಸಂಕೇಶ್ವರದಲ್ಲಿ ಇತ್ತೀಚೆಗೆ ಆರ್ಎಸ್ಎಸ್ ತಾಲೂಕಾಧ್ಯಕ್ಷ ದತ್ತಾ ಥೋರಾವತ್ (RSS Leader) ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣವು ಈಗ ತಾರ್ಕಿಕ ಅಂತ್ಯದತ್ತ ಸಾಗಿದ್ದು, ತನಿಖೆಯಲ್ಲಿ ಬೆಚ್ಚಿಬೀಳಿಸುವ ಸತ್ಯಾಂಶಗಳು ಹೊರಬಿದ್ದಿವೆ.
ಹೌದು, ಆರ್ ಎಸ್ಎಸ್ ಲೀಡರ್ (RSS Leader) ಮೇಲೆ ಹಲ್ಲೆ ಎಂದಾಕ್ಷಣ ಇದು ಕೋಮು ಸಂಘರ್ಷ ಇರಬಹುದಾ ಎನ್ನುವ ಅನುಮಾನಗಳೇ ಹುಟ್ಟಿಕೊಳ್ಳುತ್ತವೆ. ಆರಂಭದಲ್ಲಿ ಈ ಘಟನೆಯನ್ನು ಕೋಮು ಸಂಘರ್ಷದ ರೂಪದಲ್ಲಿ ಬಿಂಬಿಸಲು ಪ್ರಯತ್ನಿಸಲಾಗಿತ್ತಾದರೂ, ಪೊಲೀಸರ ಚಾಣಾಕ್ಷ ತನಿಖೆಯಿಂದಾಗಿ ಇದೀಗ ಕರಾಳ ಸತ್ಯ ಬಯಲಾಗಿದೆ. ಹೌದು, ಇದು ಸ್ವಪಕ್ಷೀಯರೇ ನಡೆಸಿದ ‘ಸುಪಾರಿ ಕಿಲ್ಲಿಂಗ್’ ಸಂಚು ಎಂಬುದು ಬಯಲಾಗಿದೆ.

ಘಟನೆಯ ಹಿನ್ನೆಲೆ:
ಅಧಿಕಾರಕ್ಕಾಗಿ ನಡೆದ ಸಂಚು: ಹುಕ್ಕೇರಿ ತಾಲೂಕಿನ ಆರ್ಎಸ್ಎಸ್ ವಲಯದಲ್ಲಿ ದತ್ತಾ ಥೋರಾವತ್ (RSS Leader) ಮತ್ತು ಸಮೀರ್ ಪಾಟೀಲ್ ನಡುವೆ ತಾಲೂಕಾಧ್ಯಕ್ಷ ಪಟ್ಟ ಹಾಗೂ ವರ್ಚಸ್ಸಿಗಾಗಿ ದೀರ್ಘಕಾಲದಿಂದ ಶೀತಲ ಸಮರ ನಡೆಯುತ್ತಿತ್ತು. ಈ ಪೈಪೋಟಿ ವಿಕೋಪಕ್ಕೆ ಹೋಗಿ, ದತ್ತಾ ಅವರನ್ನು ಹತ್ಯೆ ಮಾಡಲು ಸಮೀರ್ ಪಾಟೀಲ್ ತಂಡ ಸ್ಕೆಚ್ ಹಾಕಿತ್ತು. ಇದಕ್ಕಾಗಿ ಮಹಾರಾಷ್ಟ್ರದ ಇಚಲಕರಂಜಿಯ ಕುಖ್ಯಾತ ರೌಡಿ ಸಂಕೇತ್ ಮೇತ್ರಿ ನೇತೃತ್ವದ ಗ್ಯಾಂಗ್ಗೆ ಸುಪಾರಿ ನೀಡಲಾಗಿತ್ತು ಎನ್ನುವ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ.
ಸಿನಿಮೀಯ ಮಾದರಿಯಲ್ಲಿ ನಡೆದ ಹಲ್ಲೆ
ಸುಪಾರಿ ಪಡೆದಿದ್ದ ಸಂಕೇತ್ ಮೇತ್ರಿ ಮತ್ತು ಆತನ ತಂಡ ಸಮೀರ್ನ ಹೊಲದ ಮನೆಯಲ್ಲೇ ಎರಡು ದಿನ ವಾಸ್ತವ್ಯ ಹೂಡಿ ದತ್ತಾ ಅವರ ಚಲನವಲನದ ಮೇಲೆ ಕಣ್ಣಿಟ್ಟಿತ್ತು. ನಿಡಸೋಸಿ ರಸ್ತೆಯ ಆದರ್ಶ ನಗರದ ಬಳಿ ಬೈಕ್ನಲ್ಲಿ ತೆರಳುತ್ತಿದ್ದ ದತ್ತಾ ಅವರನ್ನು ಆಲ್ಟೋ ಕಾರಿನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು, ನಿರ್ಜನ ಪ್ರದೇಶದಲ್ಲಿ ಅಡ್ಡಗಟ್ಟಿ ತಲ್ವಾರ್ಗಳಿಂದ ಭೀಕರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಇದನ್ನೂ ಓದಿ: Yatnal: ಫೈರ್ ಬ್ರ್ಯಾಂಡ್ಗೆ ಬಿಗ್ ಶಾಕ್; ಶಿವಾಜಿ ಜಯಂತಿ ಭಾಷಣವೇ ಈಗ ಮುಳುವಾಯ್ತಾ?
ಪೊಲೀಸರ ಭರ್ಜರಿ ಕಾರ್ಯಾಚರಣೆ
ಪ್ರಕರಣದ ಗಂಭೀರತೆ ಅರಿತ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ವಿಶೇಷ ತಂಡವನ್ನು ರಚಿಸಿದ್ದರು. ಈ ತಂಡದ ನೇತೃತ್ವ ವಹಿಸಿದ್ದ ಯಮಕನಮರ್ಡಿ ಸಿಪಿಐ ಜಾವೀದ್ ಮುಶಾಪೂರೆ ಅವರು ಯಾವುದೇ ಪೂರ್ವಾಗ್ರಹ ಪೀಡಿತರಾಗದೆ ತಾಂತ್ರಿಕ ದಾಖಲೆಗಳ (ಕಾಲ್ ಹಿಸ್ಟರಿ ಮತ್ತು ಟವರ್ ಲೋಕೇಶನ್) ಆಧಾರದ ಮೇಲೆ ತನಿಖೆ ಕೈಗೊಂಡರು.

ತನಿಖೆಯ ವೇಳೆ ಇಚಲಕರಂಜಿ ಗ್ಯಾಂಗ್ನ ನಂಟು ಪತ್ತೆಯಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಸಂಕೇತ್, ಸುನೀಲ್, ಸೂರಜ್ ಮತ್ತು ಶ್ಯಾಮ ಸೇರಿದಂತೆ ಒಟ್ಟು 7 ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಇಬ್ಬರಿಗಾಗಿ ಬಲೆ ಬೀಸಲಾಗಿದೆ.
ತನಿಖೆಯ ಪ್ರಮುಖಾಂಶಗಳು:
- ಅಧಿಕಾರ ದಾಹ: ಸಂಘಟನೆಯಲ್ಲಿನ ಪಾರುಪತ್ಯಕ್ಕಾಗಿ ಸ್ವಪಕ್ಷೀಯನನ್ನೇ ಮುಗಿಸಲು ಮುಂದಾದ ಕ್ರೂರ ಮನಸ್ಥಿತಿ.
- ಸುಪಾರಿ ಸಂಚು: ಮಹಾರಾಷ್ಟ್ರದ ಗ್ಯಾಂಗ್ ಬಳಸಿಕೊಂಡು ಹಲ್ಲೆ ನಡೆಸಿ ಪ್ರಕರಣವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ.
- ತನಿಖಾ ಚಾಣಾಕ್ಷತನ: ಕೋಮು ಬಣ್ಣ ಹಚ್ಚುವ ಕಿಡಿಗೇಡಿಗಳ ಪ್ರಯತ್ನಕ್ಕೆ ಕಡಿವಾಣ ಹಾಕಿ ನೈಜ ಆರೋಪಿಗಳನ್ನು ಪತ್ತೆಹಚ್ಚಿದ ಸಿಪಿಐ ಜಾವೀದ್ ಮುಶಾಪೂರೆ ತಂಡ.
ಅಧಿಕಾರಕ್ಕಾಗಿ ನಡೆದ ಈ ರಕ್ತಪಿಪಾಸು ರಾಜಕೀಯ ಸಂಕೇಶ್ವರದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕರು ಪೊಲೀಸ್ ಇಲಾಖೆಯ ಪಾರದರ್ಶಕ ತನಿಖೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

