ಮೈಸೂರು: ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋ ಸೃಷ್ಟಿಸಿದ್ದ Muda Case ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಹೌದು, ಮುಡಾ ಸೈಟ್ ಹಂಚಿಕೆ ಹಗರಣದ ತನಿಖೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ದೂರುದಾರ ಸ್ನೇಹಮಯಿ ಕೃಷ್ಣ ಇದೀಗ ಸರ್ಕಾರದ ಬುಡಕ್ಕೆ ಆಡಿಯೋ ಬಾಂಬ್ ಇಟ್ಟದ್ದಾರೆ. ಹೌದು ದೂರುದಾರ ಕೃಷ್ಣ ಬಿಡುಗಡೆ ಮಾಡಿರುವ ಆಡಿಯೋ ಕ್ಲಿಪ್ ಇದೀಗ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳೇ ಹಗರಣ ಮುಚ್ಚಿಹಾಕಲು ಆಮಿಷ ಒಡ್ಡುತ್ತಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಅವರು ಗಂಭೀರ ಆರೋಪ ಮಾಡಿದ್ದಾರೆ.
ಅಧಿಕಾರ ಶಾಹಿಯ ಮುಖವಾಡ ಕಳಚಿದ್ರಾ ಸ್ನೇಹಮಯಿ ಕೃಷ್ಣ?
Muda Case ಬೆಳಕಿಗೆ ತಂದ, ಪ್ರಮುಖ ದೂರುದಾರ ಸ್ನೇಹಮಯಿ ಕೃಷ್ಣ ಅವರು ಮಾಜಿ ಮುಡಾ ಆಯುಕ್ತ ಡಿ.ಬಿ. ನಟೇಶ್ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ. “ಹಣದ ಆಮಿಷವೊಡ್ಡಿ ಹಗರಣವನ್ನು ತಣ್ಣಗಾಗಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ನಾನು ಯಾವುದೇ ಆಮಿಷಕ್ಕೆ ಬಲಿಯಾಗುವವನಲ್ಲ, ನನ್ನ ಕಾನೂನು ಹೋರಾಟ ಮುಂದುವರಿಯಲಿದೆ” ಎಂದು ಕೃಷ್ಣ ಗುಡುಗಿದ್ದಾರೆ. ಇದಕ್ಕೆ ಪೂರಕವಾಗಿ ನಟೇಶ್ ಅವರು ಆಪ್ತರ ಮೂಲಕ ಸಂಪರ್ಕಿಸಲು ಯತ್ನಿಸಿದ ಆಡಿಯೋ ಸಂಭಾಷಣೆಯನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: KSRTC: ಪ್ರಯಾಣಿಕರೇ ಎಚ್ಚರ! ಫೆಬ್ರವರಿ 19, 20ಕ್ಕೆ ಬಸ್ ಸಂಚಾರ ಬಂದ್?
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ಗೆ ‘ಚಾಲೆಂಜ್’!
ಈ ಬೆಳವಣಿಗೆಯ ಬೆನ್ನಲ್ಲೇ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧವೂ ಸ್ನೇಹಮಯಿ ಕೃಷ್ಣ ತಿರುಗಿಬಿದ್ದಿದ್ದಾರೆ.
- ಮುಂಬಡ್ತಿ ದಂಧೆ: ಹಗರಣದ ಆರೋಪ ಎದುರಿಸುತ್ತಿರುವ ನಟೇಶ್ ಅವರಿಗೆ ಕೋಟ್ಯಂತರ ರೂಪಾಯಿ ಹಣದ ವಿನಿಮಯದ ನಂತರ ಮುಂಬಡ್ತಿ ನೀಡಲಾಗಿದೆ ಎಂಬುದು ದೂರುದಾರರ ಆರೋಪ.
- ದಾಖಲೆಗಳ ಸುರಿಮಳೆ: ಈ ವ್ಯವಹಾರದ ಬಗ್ಗೆ ನನ್ನ ಬಳಿ ಪಕ್ಕಾ ದಾಖಲೆಗಳಿವೆ, ಅವುಗಳನ್ನು ಶೀಘ್ರವೇ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
- ಬಹಿರಂಗ ಸವಾಲು: “ಹಣ ಪಡೆದು ಮುಂಬಡ್ತಿ ಕೊಟ್ಟಿಲ್ಲ ಎಂದು ಶಾಲಿನಿ ರಜನೀಶ್ ಅವರು ಸ್ಪಷ್ಟಪಡಿಸಲಿ” ಎಂದು ಮೈಸೂರಿನಲ್ಲಿ ಕೃಷ್ಣ ಬಹಿರಂಗ ಸವಾಲು ಹಾಕಿದ್ದಾರೆ.
ಪ್ರಭುತ್ವದ ವಿರುದ್ಧ ಜನರ ಹೋರಾಟ
ಒಂದೆಡೆ ತನಿಖೆ ಎದುರಿಸುತ್ತಿರುವ ಅಧಿಕಾರಿಗಳಿಗೆ ಮುಂಬಡ್ತಿ ನೀಡುತ್ತಿರುವುದು, ಮತ್ತೊಂದೆಡೆ ದೂರುದಾರರನ್ನು ಹಣದ ಮೂಲಕ ಬಾಯಿ ಮುಚ್ಚಿಸಲು ಯತ್ನಿಸುತ್ತಿರುವುದು ವ್ಯವಸ್ಥೆಯ ದುಸ್ಥಿತಿಗೆ ಸಾಕ್ಷಿಯಾಗಿದೆ. ಅಧಿಕಾರ ಹಿಡಿದವರು ಜನರ ಆಸ್ತಿಯನ್ನು ಲೂಟಿ ಮಾಡುತ್ತಿದ್ದರೆ, ಅಸಲಿ ಸುದ್ದಿಗಳು ಹೊರಬರದಂತೆ ತಡೆಯಲಾಗುತ್ತಿದೆ. ಆದರೆ, ‘ಅಸಲಿ ಸುದ್ದಿ’ ಇಂತಹ ಜನವಿರೋಧಿ ಕೃತ್ಯಗಳನ್ನು ಸದಾ ಪ್ರಶ್ನಿಸುತ್ತಲೇ ಇರುತ್ತದೆ.

