ಟಿವಿಯಲ್ಲಿ ಭವಿಷ್ಯ ಹೇಳುತ್ತಿದ್ದ ಶಿವಮೊಗ್ಗ ಮೂಲದ ಖ್ಯಾತ ಟಿವಿ ಜ್ಯೋತಿಷಿ ಕಮಲಾಕರ ಭಟ್ನ ಅಕ್ರಮ ಸಂಬಂಧ ಇದೀಗ ಬಟಾಬಯಲಾಗಿದೆ. ಈ ವಿಚಾರವಾಗಿ ನಡೆದ ಗಲಾಟೆಯು ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಮಲಾಕರ ಭಟ್ ಗುರೂಜಿ ಸೇರಿ ಒಟ್ಟು ಏಳು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಕ್ತೆಯನ್ನೇ ಬುಟ್ಟಿಗೆ ಹಾಕಿಕೊಂಡಿದ್ದ ಕಿರಾತಕ ಜ್ಯೋತಿಷಿ
ನಂಬಿ ಬಂದ ಭಕ್ತೆಯನ್ನೇ ಈ ಕಿರಾತಕ ಜ್ಯೋತಿಷಿ ಕಮಲಾಕರ ಭಟ್ ತನ್ನ ಕಾಮದ ಬುಟ್ಟಿಗೆ ಬೀಳಿಸಿಕೊಂಡಿದ್ದಾನೆ. ಜ್ಯೋತಿಷ್ಯದ ಹೆಸರಲ್ಲಿ ವಿವಾಹಿತ ಮಹಿಳೆಯ ತಲೆಕೆಡಿಸಿದ್ದ ಕಮಲಾಕರ ಭಟ್ನ ಕರಾಳ ಮುಖ ಈಗ ಸಿದ್ದಾಪುರದ ಭೀಕರ ಕೊಲೆ ಪ್ರಕರಣದ ಮೂಲಕ ಬಯಲಾಗಿದೆ.
ಶಿವಮೊಗ್ಗದ ಮಹೇಶ್ ನಾಯ್ಕ್ ಎಂಬುವವರ ಪತ್ನಿ ಸುಚಿತ್ರಾ, ಸಂಸಾರದ ಸಮಸ್ಯೆಗಳಿಗೆ ಪರಿಹಾರ ಕೇಳಲು ಶಿವಮೊಗ್ಗದ ಜ್ಯೋತಿಷಿ ಕಮಲಾಕರ ಭಟ್ ಎಂಬಾತನನ್ನು ಸಂಪರ್ಕಿಸಿದ್ದಳು. ಪತಿ ಮಹೇಶ್ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿದ್ದದ್ದೇ ಜ್ಯೋತಿಷಿಗೆ ವರದಾನವಾಯಿತು. ಒಬ್ಬಂಟಿಯಾಗಿದ್ದ ಸುಚಿತ್ರಾಳನ್ನು ಜ್ಯೋತಿಷ್ಯದ ಸಲಹೆಗಳ ನೆಪದಲ್ಲಿ ಪುಸಲಾಯಿಸಿದ ಗುರೂಜಿ, ಆಕೆಯನ್ನು ತನ್ನ ಅಕ್ರಮ ಸಂಬಂಧದ ಜಾಲಕ್ಕೆ ಎಳೆದುಕೊಂಡಿದ್ದನು.
ಈ ಅಕ್ರಮ ಸಂಬಂಧದ ವಿಚಾರ ತಿಳಿದ ಪತಿ ಮಹೇಶ್ ಎಷ್ಟೇ ಬುದ್ಧಿ ಹೇಳಿದರೂ ಸುಚಿತ್ರಾ ಕೇಳಲಿಲ್ಲ. ಆರು ತಿಂಗಳ ಹಿಂದೆಯೇ ಮಕ್ಕಳನ್ನು ಕರೆದುಕೊಂಡು ಹೋಗಿ ಜ್ಯೋತಿಷಿಯ ಮನೆಯಲ್ಲೇ ಆಶ್ರಯ ಪಡೆದಿದ್ದಳು. ಮೂಲಗಳ ಪ್ರಕಾರ, ಅಲ್ಲಿ ಸುಚಿತ್ರಾ ಮತ್ತು ಜ್ಯೋತಿಷಿ ಒಂದೇ ಕೋಣೆಯಲ್ಲಿ ಇರುತ್ತಿದ್ದರೆ, ಇಬ್ಬರು ಹೆಣ್ಣುಮಕ್ಕಳನ್ನು ಬೇರೆ ಕೋಣೆಯಲ್ಲಿ ಇರಿಸಲಾಗುತ್ತಿತ್ತು. ತಾಯಿಯ ಈ ನಡವಳಿಕೆಯನ್ನು ವಿರೋಧಿಸಿದ ಮಗಳಿಗೆ ಜ್ಯೋತಿಷಿ ಹಾಗೂ ಸುಚಿತ್ರಾ ಸೇರಿ “ವಿಷ ಹಾಕಿ ಕೊಲ್ಲುವುದಾಗಿ” ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.
ತಾಯಿ ಮತ್ತು ಜ್ಯೋತಿಷಿಯ ಕಿರುಕುಳ ತಾಳಲಾರದೆ ಮಗಳು ತನ್ನ ತಂದೆಗೆ ʻʻಅಪ್ಪಾ ನನ್ನನ್ನು ಉಳಿಸು, ಇಲ್ಲವಾದರೆ ನಾನು ಸಾಯುತ್ತೇನೆʼʼ ಎಂದು ಸಂದೇಶ ಕಳುಹಿಸಿದ್ದಾಳೆ. ತಕ್ಷಣವೇ ಕಾರ್ಯಪ್ರವೃತ್ತರಾದ ಮಹೇಶ್ ಅವರು ತಮ್ಮ ಮಗಳನ್ನು ಶಿವಮೊಗ್ಗಕ್ಕೆ ಬರುವಂತೆ ತಿಳಿಸಿ ಅಲ್ಲಿಂದ ತಮ್ಮೂರಿನ ಮನೆಗೆ ಕರೆತಂದಿದ್ದರು.
ಇದೇ ವಿಚಾರವಾಗಿ ಮಗಳನ್ನು ವಾಪಸ್ ಕರೆದೊಯ್ಯಲು ಸುಚಿತ್ರಾ, ಜ್ಯೋತಿಷಿ ಕಮಲಾಕರ ಭಟ್ ಮತ್ತು ಕೆಲವು ಯುವಕರೊಂದಿಗೆ ವಸಂತ್ ನಾಯ್ಕ್ ಮನೆಗೆ ಬಂದಿದ್ದಳು. ಈ ಸಂದರ್ಭದಲ್ಲಿ ಸುಚಿತ್ರಾಳ ಪತಿ ಮಹೇಶ್ ಕೂಡ ಸ್ಥಳಕ್ಕೆ ಬಂದಿದ್ದು, ದಂಪತಿ ನಡುವೆ ತೀವ್ರ ವಾಗ್ವಾದ ನಡೆದಿದೆ. ಜಗಳ ತಾರಕಕ್ಕೇರಿದಾಗ ಸುಚಿತ್ರಾ ಜೊತೆ ಬಂದಿದ್ದ ಯುವಕರು ಏಕಾಏಕಿ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಜಗಳ ಬಿಡಿಸಲು ಬಂದಿದ್ದ ವಸಂತ್ ನಾಯ್ಕ್ (41) ಎನ್ನುವವರಿಗೆ ಚಾಕು ಇರಿಯಲಾಗಿದೆ. ಚಾಕು ಇರಿತಕ್ಕೊಳಾಗದ ವಸಂತ್ ಅವರನ್ನು ಆಸ್ಪತ್ರೆಗೆ ಸೇರಿಸಲು ಕರೆದೊಯ್ಯಲಾಯಿತಾದರೂ, ದಾರಿಯ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಈ ನಡುವೆ ಸುಚಿತ್ರಾ ಪತಿ ಮಹೇಶ್ ಮತ್ತು ಪಕ್ಕದ ಮನೆಯ ಕುಮಾರ್ ಇಬ್ಬರಿಗೂ ಗಂಭೀರ ಗಾಯಗಳಾಗಿವೆ.ಸಧ್ಯ ಇಬ್ಬರಿಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮೃತ ವಸಂತ್ ಅವರ ಅತ್ತಿಗೆ ಸಂಧ್ಯಾ ನಾಯ್ಕ್ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಎ1 ಆರೋಪಿ ಸುಚಿತ್ರಾ, ಎ2: ಲೋಕನಾಥ ಚೌಡಪ್ಪ ನಾಯ್ಕ್,ಎ3 ಅಪರಿಚಿತರು, ಎ4: ಜ್ಯೋತಿಷಿ ಕಮಲಾಕರ ಭಟ್. ಒಟ್ಟು ಏಳು ಮಂದಿ ಆರೋಪಿಗಳನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿದಿದೆ.

