ಕನ್ನಡ ಚಿತ್ರರಂಗದಲ್ಲಿ ಈಗ ಹೊಸದೊಂದು ಕಿರಿಕ್ ಶುರುವಾಗಿದೆ. ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿರುವ ಗಾಂಧಿನಗರದಲ್ಲಿ ಈಗ ʻJogi Premʼ ಮತ್ತು ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ ನಡುವಿನ ಜಗಳ ಬೀದಿಗೆ ಬಂದಿದೆ. ನಿರ್ದೇಶಕ ಪ್ರೇಮ್ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ವೈಯಕ್ತಿಕವಾಗಿ ಹೀಯಾಳಿಸಿದ ಆರೋಪದ ಮೇಲೆ ಕನಕಪುರ ಶ್ರೀನಿವಾಸ್ ವಿರುದ್ಧ ಪ್ರೇಮ್ ಈಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಫಿಲ್ಮ್ ಚೇಂಬರ್) ದೂರು ನೀಡಿದ್ದಾರೆ.
ವಿವಾದದ ಕಿಡಿ ಹತ್ತಿದ್ದು ಎಲ್ಲಿ?
ಇತ್ತೀಚೆಗೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ತಮ್ಮ ‘ಕಾಟನ್ಪೇಟೆ ಗೇಟ್’ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಚಿತ್ರರಂಗದ ಹಲವರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ವೇಳೆ ನಿರ್ದೇಶಕ Jogi Prem ಅವರ ಹೆಸರನ್ನು ಎಳೆತಂದ ಶ್ರೀನಿವಾಸ್, ಹಣಕಾಸಿನ ವಿಚಾರವಾಗಿ ಪ್ರೇಮ್ ಬಗ್ಗೆ ಕೆಟ್ಟ ಪದಗಳನ್ನು ಬಳಸಿ ನಿಂದಿಸಿದ್ದರು ಎನ್ನಲಾಗಿದೆ. ಇದು ಪ್ರೇಮ್ ಮತ್ತು ಅವರ ಕುಟುಂಬದವರ ಮನಸ್ಸಿಗೆ ಭಾರಿ ನೋವುಂಟು ಮಾಡಿದೆ.
ದೂರಿನಲ್ಲಿ Jogi Prem ಹೇಳಿದ್ದೇನು?
ತಮ್ಮ ದೂರಿನ ಪತ್ರದಲ್ಲಿ Jogi Prem ಹಲವು ವರ್ಷಗಳ ಹಿಂದಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ. “2004ರಲ್ಲಿ ಕನಕಪುರ ಶ್ರೀನಿವಾಸ್ ಅವರು ನನಗೆ ಸಿನಿಮಾ ಮಾಡಲು 9 ಲಕ್ಷ ರೂಪಾಯಿ ಅಡ್ವಾನ್ಸ್ ನೀಡಿದ್ದರು. ಅವರಿಗಾಗಿ ನಾನು ಕಥೆ ಸಿದ್ಧಪಡಿಸಿ, ಆಫೀಸ್ ಓಪನ್ ಮಾಡಿ ಒಂದು ವರ್ಷ ಕಾದೆ. ಆದರೆ ಅವರು ಯಾವುದೇ ಸ್ಪಂದನೆ ನೀಡಲಿಲ್ಲ. ಇದರಿಂದಾಗಿ ನಾನು ಬೇರೆ ದೊಡ್ಡ ಸಿನಿಮಾಗಳ ಅವಕಾಶ ಕಳೆದುಕೊಂಡೆ ಮತ್ತು ನನಗೆ ಸುಮಾರು 20 ಲಕ್ಷದವರೆಗೆ ನಷ್ಟವಾಯಿತು” ಎಂದು ಪ್ರೇಮ್ ವಿವರಿಸಿದ್ದಾರೆ.
ಅಷ್ಟೇ ಅಲ್ಲದೆ, ಶ್ರೀನಿವಾಸ್ ಅವರು ಕಷ್ಟದಲ್ಲಿದ್ದಾಗ ಮಾನವೀಯತೆ ದೃಷ್ಟಿಯಿಂದ ಸಾ.ರ. ಗೋವಿಂದ್ ಅವರ ಸಮ್ಮುಖದಲ್ಲಿ ತಾನು 5 ಲಕ್ಷ ರೂಪಾಯಿಗಳನ್ನು ವಾಪಸ್ ನೀಡಿದ್ದೆ ಎಂದು ಪ್ರೇಮ್ ಹೇಳಿದ್ದಾರೆ. ಹೀಗಿದ್ದರೂ ಪತ್ರಿಕಾಗೋಷ್ಠಿಯಲ್ಲಿ ತನ್ನ ಬಗ್ಗೆ ಮತ್ತು ತನ್ನ ತಾಯಿಯ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: iPhone Offers: ವ್ಯಾಲೆಂಟೈನ್ಸ್ ಡೇ ಧಮಾಕಾ; ಆಪಲ್ನಿಂದ ಬಂಪರ್ ಡಿಸ್ಕೌಂಟ್!
ಪತ್ನಿ ರಕ್ಷಿತಾ ಮತ್ತು ಮಗನಿಗೆ ಮಾನಸಿಕ ಹಿಂಸೆ
ಈ ವಿವಾದ ಕೇವಲ ಪ್ರೇಮ್ಗೆ ಮಾತ್ರವಲ್ಲ, ಅವರ ಪತ್ನಿ ರಕ್ಷಿತಾ ಪ್ರೇಮ್ ಮತ್ತು ಮಗನಿಗೂ ಮಾನಸಿಕವಾಗಿ ತೊಂದರೆ ಕೊಟ್ಟಿದೆ. “ನನ್ನ 25 ವರ್ಷದ ವೃತ್ತಿ ಜೀವನದಲ್ಲಿ ಇಂತಹ ಕೆಟ್ಟ ಮಾತುಗಳನ್ನು ನಾನು ಕೇಳಿರಲಿಲ್ಲ. ಈ ನಿಂದನೆಯಿಂದ ನನ್ನ ಪತ್ನಿ ಮತ್ತು ಮಗ ಮನನೊಂದಿದ್ದಾರೆ. ಅಭಿಮಾನಿಗಳಿಗೂ ಇದರಿಂದ ನೋವಾಗಿದೆ” ಎಂದು ಪ್ರೇಮ್ ಬೇಸರ ಹೊರಹಾಕಿದ್ದಾರೆ.
ಕನಕಪುರ ಶ್ರೀನಿವಾಸ್ ಅವರು ಕೇವಲ ಪ್ರೇಮ್ ಮಾತ್ರವಲ್ಲದೆ, ಇಂಡಸ್ಟ್ರಿಯ ಇನ್ನೂ ಕೆಲವು ಗಣ್ಯರ ಬಗ್ಗೆಯೂ ಅಸಮಾಧಾನ ಹೊರಹಾಕಿದ್ದರು. ಈಗ ಪ್ರೇಮ್ ಅವರು ಅಧಿಕೃತವಾಗಿ ವಾಣಿಜ್ಯ ಮಂಡಳಿಗೆ ದೂರು ನೀಡಿರುವುದರಿಂದ, ಚೇಂಬರ್ ಈ ಇಬ್ಬರನ್ನೂ ಕರೆಸಿ ಸಂಧಾನ ಮಾಡುತ್ತಾ ಅಥವಾ ಶ್ರೀನಿವಾಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾ ಎಂಬ ಕುತೂಹಲ ಮೂಡಿದೆ.

