Epstein Files: ಭಾರತೀಯ ಮಾಧ್ಯಮ ರಂಗದ ಇತಿಹಾಸದಲ್ಲಿ ಫೆಬ್ರವರಿ 13, 2026 ಒಂದು ಕಪ್ಪು ಚುಕ್ಕೆಯಾಗಿ ಉಳಿಯಲಿದೆ. ಸರ್ಕಾರವನ್ನು ಪ್ರಶ್ನಿಸಬೇಕಾದ ಪತ್ರಿಕೋದ್ಯಮ, ಇಂದು ಅಧಿಕಾರಸ್ಥರನ್ನು ಉಳಿಸಲು ಹೋಗಿ ಜಗತ್ತೇ ಅಸಹ್ಯ ಪಡುವ ಒಬ್ಬ ರಾಕ್ಷಸನಿಗೆ ‘ಸನ್ಮಾನ’ ಮಾಡುವ ಮಟ್ಟಕ್ಕೆ ಕುಸಿದಿದೆ. ಹೌದು, ಎನ್ಡಿಟಿವಿ (NDTV) ನಡೆಸಿದ ಚರ್ಚೆಯಲ್ಲಿ ಆಂಕರ್ ಪದ್ಮಜಾ ಜೋಶಿ ಅವರು ಕುಖ್ಯಾತ ಬಾಲಕಾಮುಕ ಜೆಫ್ರಿ ಎಫ್ಸ್ಟೀನ್ನನ್ನು ಸಮರ್ಥಿಸಿದ ರೀತಿ ನೋಡಿದರೆ, ಈ ದೇಶದಲ್ಲಿ ಪತ್ರಿಕೋದ್ಯಮದ ಅಂತಿಮ ಸಂಸ್ಕಾರ ನಡೆದಿದೆಯೇ ಎಂಬ ಸಂಶಯ ಮೂಡುತ್ತಿದೆ.
ನೈತಿಕತೆಯ ಅಧಃಪತನಕ್ಕೆ ಒಂದು ಮಿತಿಯಿರಬೇಡವೇ?
ಸತ್ಯದ ಪರವಾಗಿ ನಿಲ್ಲಬೇಕಾದ ಪತ್ರಿಕೋದ್ಯಮವು ಅಧಿಕಾರದ ಪಾದಸೇವೆಯಲ್ಲಿ ಮೈಮರೆತಾಗ ಎಂತಹ ಭೀಕರ ಅನಾಹುತಗಳು ಸಂಭವಿಸುತ್ತವೆ ಎಂಬುದಕ್ಕೆ ಎನ್ಡಿಟಿವಿ (NDTV) ನಡೆಸಿದ ಚರ್ಚೆಯೇ ಜ್ವಲಂತ ಸಾಕ್ಷಿ. ಜಗತ್ತೇ ಅಸಹ್ಯ ಪಡುವ ಒಬ್ಬ ಕುಖ್ಯಾತ ಬಾಲಕಾಮುಕ, ಲೈಂಗಿಕ ಅಪರಾಧಿಯನ್ನು “ಸಮರ್ಥಿಸುವ” ಹಂತಕ್ಕೆ ಈ ದೇಶದ ಪ್ರಭಾವಿ ಮಾಧ್ಯಮಗಳು ಇಳಿದಿವೆ ಎಂದರೆ, ಅದು ಭಾರತೀಯ ಪತ್ರಿಕೋದ್ಯಮದ ಕಗ್ಗೊಲೆಯೇ ಸರಿ
ನರರಾಕ್ಷಸನಿಗೂ ‘ನೆಟ್ವರ್ಕಿಂಗ್’ ಗ್ಲಾಮರ್!
ಜೆಫ್ರಿ ಎಫ್ಸ್ಟೀನ್ ಎಂಬ ಹೆಸರನ್ನು ಕೇಳಿದರೆ ಸಾಕು, ಅತ್ತ ಅಮೆರಿಕದಿಂದ ಇತ್ತ ಯುರೋಪ್ವರೆಗೆ ನಾಗರಿಕ ಸಮಾಜ ನಡುಗುತ್ತದೆ. ನೂರಾರು ಅಪ್ರಾಪ್ತ ಬಾಲಕಿಯರ ಬದುಕನ್ನು ನರಕವಾಗಿಸಿ, ಅವರನ್ನು ಲೈಂಗಿಕ ಗುಲಾಮಗಿರಿಗೆ ತಳ್ಳಿದ ಈ ನರರಾಕ್ಷಸನ ಪರವಾಗಿ ಭಾರತದ ಆಂಕರ್ ಪದ್ಮಜಾ ಜೋಶಿ ಅವರು ಬಳಸಿದ ತರ್ಕ ಕೇಳಿದರೆ ಎಂಥವರಿಗೂ ರಕ್ತ ಕುದಿಯುತ್ತದೆ.
ಇದನ್ನೂ ಓದಿ: ಸಿದ್ದರಾಮಯ್ಯ ‘ನಾ ಕೊಡೆ’, ಡಿಕೆಶಿ ‘ನಾ ಬಿಡೆ’!: ಡೆಲ್ಲಿಯಿಂದ ಗನ್ ಹಿಡಿದು ಬಂದ್ರಾ ಡಿಕೆ?
ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಅವರ ಹೆಸರು ‘Epstein Files‘ನಲ್ಲಿ ಬಹಿರಂಗವಾದ ಕೂಡಲೇ, ಮಾಧ್ಯಮಗಳು ಸಚಿವರ ನೈತಿಕತೆಯ ಬಗ್ಗೆ ಪ್ರಶ್ನಿಸಬೇಕಿತ್ತು. ಆದರೆ ಎನ್ಡಿಟಿವಿ ಆಂಕರ್ ಮಾಡಿದ್ದೇ ಬೇರೆ. ಎಫ್ಸ್ಟೀನ್ ಒಬ್ಬ ಕಾಮುಕನಿರಬಹುದು, ಆದರೆ ಆತನಿಗೆ ದೊಡ್ಡ “ಬಿಸಿನೆಸ್ ನೆಟ್ವರ್ಕಿಂಗ್” ಇತ್ತು ಎಂದು ವ್ಯಾಖ್ಯಾನಿಸುವ ಮೂಲಕ ಅಪರಾಧಕ್ಕೂ ಒಂದು ಹೊಳಪು ನೀಡಲು ಪ್ರಯತ್ನಿಸಿದರು. ಒಬ್ಬ ಮಹಿಳೆಯಾಗಿ, ನೂರಾರು ಹೆಣ್ಣುಮಕ್ಕಳ ಕಣ್ಣೀರು ಇವರಿಗೆ ಕಾಣಿಸಲಿಲ್ಲವೇ? ಸಚಿವರ ಕುರ್ಚಿ ಉಳಿಸಲು ಹೋಗಿ ಒಬ್ಬ ವಿಕೃತ ಕಾಮಿಯ ಪರವಾಗಿ ಮೀಡಿಯಾ ಸಲಾಮು ಹೊಡೆಯುವುದು ಎಷ್ಟು ಸರಿ?
ರವೀಶ್ ಕುಮಾರ್ ಅವರ ‘ಸರ್ಜಿಕಲ್’ ಸತ್ಯಗಳು
ಮಾಧ್ಯಮಗಳ ಈ ಬೌದ್ಧಿಕ ದಿವಾಳಿತನವನ್ನು ಕಂಡು ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರು ತಮ್ಮದೇ ಶೈಲಿಯಲ್ಲಿ ಚಾಟಿ ಬೀಸಿದ್ದಾರೆ.
“ಇದೇ ತರ್ಕವನ್ನು ಮುಂದುವರಿಸುವುದಾದರೆ, ಎಫ್ಸ್ಟೀನ್ನನ್ನು ಭಾರತದಲ್ಲಿ ‘ಸಂತ’ ಎಂದು ಘೋಷಿಸಿ, ಅವನನ್ನೇ ನೀತಿ ಆಯೋಗಕ್ಕೆ ಸಲಹೆಗಾರನನ್ನಾಗಿ ನೇಮಿಸಬಹುದು. ಅಷ್ಟೇ ಅಲ್ಲ, ಮಹಿಳಾ ಮಂತ್ರಿಗಳು ಈ ನಿರ್ಧಾರವನ್ನು ಸ್ವಾಗತಿಸಬೇಕು!”
ರವೀಶ್ ಅವರ ಈ ವ್ಯಂಗ್ಯವು ಸತ್ಯದ ಮುಖವಾಡ ಕಳಚಿದೆ. ಹಿಂದೆ ಎಂ.ಜೆ. ಅಕ್ಬರ್ ಅವರ ಮೇಲೆ ಆರೋಪ ಬಂದಾಗ ಅವರು ರಾಜೀನಾಮೆ ನೀಡಿದ್ದರು. ಆದರೆ ಇಂದು ಸಚಿವರ ಹೆಸರು ಜಾಗತಿಕ ಕಾಮುಕನ ಡೈರಿಯಲ್ಲಿ ದಾಖಲಾಗಿದ್ದರೂ, ಸಚಿವರು ಸಮರ್ಥನೆ ನೀಡುತ್ತಿದ್ದಾರೆ ಮತ್ತು ಮಾಧ್ಯಮಗಳು ಅವರಿಗೆ ರಕ್ಷಣಾ ಕವಚವಾಗಿ ನಿಂತಿವೆ. ಇದು ಅಸಹ್ಯದ ಪರಮಾವಧಿ ಅಲ್ಲದೇ ಇನ್ನೇನು?
ಜಾಗತಿಕ ನೈತಿಕತೆ VS ಭಾರತೀಯ ಬಂಡತನ
ಎಫ್ಸ್ಟೀನ್ ಪ್ರಕರಣದಲ್ಲಿ ಜಗತ್ತಿನಾದ್ಯಂತ ಸಾಲು ಸಾಲು ರಾಜೀನಾಮೆಗಳು ನಡೆಯುತ್ತಿವೆ. ಪ್ರಬಲ ರಾಷ್ಟ್ರಗಳ ಗಣ್ಯರು ಈತನ ಜೊತೆಗಿನ ನಂಟಿನ ಕಾರಣಕ್ಕೆ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತಿದ್ದಾರೆ. ಆದರೆ ಭಾರತದಲ್ಲಿ ಮಾತ್ರ ಸಚಿವರು “ನಾನು ಆತನನ್ನು 3-4 ಬಾರಿ ಮಾತ್ರ ಭೇಟಿಯಾಗಿದ್ದೆ” ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಈ ಬಗ್ಗೆ ಕಟುವಾದ ಪ್ರಶ್ನೆಯನ್ನು ಎತ್ತಿದ್ದಾರೆ: “ನಾವು ವಿಕೃತ ಕಾಮುಕರನ್ನು ಮತ್ತು ನಮ್ಮ ದೇಶದ ಒಳಗೇ ಬೆಳೆಯುತ್ತಿರುವ ಅತ್ಯಾಚಾರಿಗಳನ್ನು ರಕ್ಷಿಸಲು ಶುರು ಮಾಡಿದರೆ, ಸಮಾಜವಾಗಿ ನಾವೆಲ್ಲಿದ್ದೇವೆ?” ಎಂಬ ಪ್ರಶ್ನೆಗೆ ಪ್ರತಿಯೊಬ್ಬ ಭಾರತೀಯನೂ ಉತ್ತರ ಕಂಡುಕೊಳ್ಳಬೇಕಿದೆ.
Hi NDTV, instead of wasting your promoter’s money on trolling me for my post on that absolutely bizarre- criminal side and professional side defense of Epstein in your news segment, why not invest in ensuring that rapists and paedophiles aren’t whitewashed on your channel?
And…— Priyanka Chaturvedi🇮🇳 (@priyankac19) February 13, 2026
ಆತ್ಮಹತ್ಯೆ ಮಾಡಿಕೊಂಡ ಪತ್ರಿಕೋದ್ಯಮ
ಪತ್ರಿಕೋದ್ಯಮದ ಮೂಲ ಕೆಲಸವೇ ಅಧಿಕಾರಕ್ಕೆ ಸತ್ಯವನ್ನು ಹೇಳುವುದು (Speaking Truth to Power). ಆದರೆ ಇಂದು ಅದು “ಅಧಿಕಾರಕ್ಕಾಗಿ ಸತ್ಯದ ಕಗ್ಗೊಲೆ” ಮಾಡುವ ಹಂತಕ್ಕೆ ತಲುಪಿದೆ. ಎನ್ಡಿಟಿವಿಯ ಚರ್ಚೆಯಲ್ಲಿ ಹಿರಿಯ ಪತ್ರಕರ್ತ ಅಶುತೋಷ್ ಅವರು ಆಂಕರ್ ಪದ್ಮಜಾ ಜೋಶಿಯವರನ್ನು ತಡೆದು ಎಚ್ಚರಿಸಿದ್ದು ಒಂದು ಮಟ್ಟಕ್ಕೆ ಇನ್ನು ಜೀವಂತವಿರುವ ಪತ್ರಕರ್ತರ ಸಾಕ್ಷಿಪ್ರಜ್ಞೆಯನ್ನು ತೋರಿಸುತ್ತದೆ. ಒಂದು ವೇಳೆ ಆಂಕರ್ ಪದ್ಮಜಾ ಜೋಶಿಯವರನ್ನು ತಡೆಯದೇ ಹೋಗಿದ್ದರೆ, ಅವರ ಕಾಮುಕನ ಸಮರ್ಥನೆ ಇನ್ನೂ ಯಾವ ಮಟ್ಟಕ್ಕೆ ಹೋಗುತ್ತದೆಯೋ ಗೊತ್ತಿಲ್ಲ. ಆದರೆ, ಒಟ್ಟಾರೆ ಆ ಚಿತ್ರಣ ಮಾತ್ರ ಅತ್ಯಂತ ಭೀಕರವಾಗಿದೆ.
ಸಮಾಜಕ್ಕೆ ಎಚ್ಚರಿಕೆಯ ಕರೆ
ಒಬ್ಬ ಅಪರಾಧಿಯ ಬಣ್ಣ ಮತ್ತು ಅಧಿಕಾರದ ಬಲ ನೋಡಿ ಮೌನವಹಿಸುವ ಅಥವಾ ಸಮರ್ಥಿಸುವ ಈ ಗೋದಿ ಮೀಡಿಯಾಗಳು ದೇಶಕ್ಕೆ ಹಿಡಿದ ಶಾಪ. ಎಫ್ಸ್ಟೀನ್ನಂತಹ ರಾಕ್ಷಸರನ್ನು ಮಾನವೀಯ ನೆಲೆಯಲ್ಲಿ ಅಥವಾ ವಾಣಿಜ್ಯ ನೆಲೆಯಲ್ಲಿ ನೋಡಲು ಸಾಧ್ಯವೇ ಇಲ್ಲ. ಆತ ಒಬ್ಬ ವಿಕೃತ ಕಾಮಿ, ಅಷ್ಟೇ. ಆತನನ್ನು ಯಾವುದೇ ರೂಪದಲ್ಲಿ ಸಮರ್ಥಿಸಿಕೊಳ್ಳುವುದು ಕೂಡ ಅಷ್ಟೇ ದೊಡ್ಡ ಅಪರಾಧ.
ಅಧಿಕಾರಕ್ಕಾಗಿ ಅಸಹ್ಯವನ್ನು ಹೊಗಳಿ, ನೈತಿಕತೆಯನ್ನು ಮಣ್ಣುಪಾಲು ಮಾಡಿದ ಈ ಪತ್ರಿಕೋದ್ಯಮಕ್ಕೆ ಜನರೇ ಬುದ್ಧಿ ಕಲಿಸಬೇಕಿದೆ. ಸತ್ಯವನ್ನು ಹೇಳುವವರು ಧ್ವನಿ ಕಳೆದುಕೊಳ್ಳುತ್ತಿದ್ದಾರೆ, ಸುಳ್ಳನ್ನು ಸಕ್ಕರೆ ಸವಿದು ಮಾರುವವರು ಆಸನ ಅಲಂಕರಿಸುತ್ತಿದ್ದಾರೆ. ಸಮಾಜ ಎಚ್ಚೆತ್ತುಕೊಳ್ಳದಿದ್ದರೆ ಸತ್ಯ ಎಂಬುದು ಕೇವಲ ಇತಿಹಾಸದ ಪುಟಗಳಲ್ಲಿ ಮಾತ್ರ ಉಳಿಯಲಿದೆ.
ಅಧಿಕಾರಸ್ಥರ ಪಾದಸೇವೆಯಲ್ಲ, ಸತ್ಯದ ಸೇವೆಯೇ ನಮ್ಮ ಗುರಿ – ಅಸಲಿ ಸುದ್ದಿ

