ಬೆಳಗಾವಿ: ಸಮಾಜದ ಕಾವಲುಗಾರರ ಸೋಗಿನಲ್ಲಿ ಬೆತ್ತಲೆ ದಂಧೆಗೆ ಇಳಿದಿದ್ದ ಮೂವರು ನಕಲಿ ಪತ್ರಕರ್ತರನ್ನು Belagavi ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಮಹಿಳಾ ಅಧಿಕಾರಿಯೊಬ್ಬರ ಬೆಡ್ರೂಮ್ಗೆ ಕನ್ನ ಹಾಕಿ, ಗುಪ್ತ ಕ್ಯಾಮೆರಾ ಮೂಲಕ ಅವರ ಖಾಸಗಿ ಕ್ಷಣಗಳನ್ನು ಸೆರೆಹಿಡಿದು ಕೋಟಿ ಕೋಟಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಈ ಕಿರಾತಕರ ಕೃತ್ಯ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.
ಬಲ್ಬ್ ಹೋಲ್ಡರ್ನಲ್ಲಿತ್ತು ‘ಗುಪ್ತ’ ಸಂಚು!
ಬಂಧಿತ ಆರೋಪಿಗಳನ್ನು Belagavi ಜಿಲ್ಲೆಯ ಗೋಕಾಕ್ನ ಸಮೀರ್ ನಿಸಾರ್ ಅಹಮ್ಮದ್ ಶೇಖ್ (32), ಅಬ್ದುಲ್ ರಶೀದ್ ಮಕಾಂದಾರ್ (51) ಮತ್ತು ಮೊಹಮ್ಮದ್ ದಿಲಾವರ್ ಬಾಳೇಕುಂದ್ರಿ (43) ಎಂದು ಗುರುತಿಸಲಾಗಿದೆ. ಈ ಗ್ಯಾಂಗ್ ಅತ್ಯಂತ ವ್ಯವಸ್ಥಿತವಾಗಿ ಸಂಚು ರೂಪಿಸಿತ್ತು. ಮಹಿಳಾ ಅಧಿಕಾರಿಯ ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆಯನ್ನೇ ದಾಳವಾಗಿ ಬಳಸಿಕೊಂಡ ಕಿಲಾಡಿಗಳು, ಆಕೆಯ ಸಹಾಯದಿಂದ ಯಾರಿಗೂ ತಿಳಿಯದಂತೆ ಮನೆಗೆ ಲಗ್ಗೆ ಇಟ್ಟಿದ್ದರು. ಮನೆಯ ಬೆಡ್ರೂಮ್ ಮತ್ತು ಬಾತ್ರೂಮ್ನ ಲೈಟ್ ಬಲ್ಬ್ ಹೋಲ್ಡರ್ಗಳಲ್ಲಿ ಹಿಡನ್ ಕ್ಯಾಮೆರಾಗಳನ್ನು ಅಳವಡಿಸಿ ಅಧಿಕಾರಿ ಬೆತ್ತಲೆಯಾಗಿರುವ ದೃಶ್ಯಗಳನ್ನು ಅಕ್ರಮವಾಗಿ ಚಿತ್ರೀಕರಿಸಿದ್ದರು.
ಕೋಟಿ ರೂಪಾಯಿಗೆ ಡಿಮ್ಯಾಂಡ್; ಕೊಡದಿದ್ದರೆ ವೈರಲ್ ಭೀತಿ!
ವಿಡಿಯೋ ರೆಕಾರ್ಡ್ ಆದ ಬೆನ್ನಲ್ಲೇ ಈ ನಕಲಿ ಪತ್ರಕರ್ತರ ಅಸಲಿ ಆಟ ಶುರುವಾಗಿತ್ತು. ತಾವು ಪತ್ರಕರ್ತರು ಎಂದು ಪರಿಚಯಿಸಿಕೊಂಡು ಅಧಿಕಾರಿಯನ್ನು ಸಂಪರ್ಕಿಸಿದ ಈ ಕಿರಾತಕರು, “ನಿಮ್ಮ ಬೆತ್ತಲೆ ವಿಡಿಯೋ ನಮ್ಮ ಬಳಿ ಇದೆ. ಒಂದು ಕೋಟಿ ರೂಪಾಯಿ ಕೊಡದಿದ್ದರೆ ಇದನ್ನು ಯೂಟ್ಯೂಬ್ ಮತ್ತು ಸುದ್ದಿ ವಾಹಿನಿಗಳಲ್ಲಿ ಬಿತ್ತರಿಸುತ್ತೇವೆ” ಎಂದು ಬೆದರಿಕೆ ಹಾಕಿದ್ದರು. ಕೊನೆಗೆ 50 ಲಕ್ಷ ರೂಪಾಯಿ ನೀಡುವಂತೆ ಮಾನಸಿಕ ಕಿರುಕುಳ ನೀಡಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದರು.
ಇದನ್ನೂ ಓದಿ: Metro Ticket Hike: ಬೆಂಗಳೂರಿಗರಿಗೆ ಬಿಗ್ ಶಾಕ್! ಜನಸಾಮಾನ್ಯರ ಜೇಬಿಗೆ ಕನ್ನ ಹಾಕುತ್ತಿದೆಯೇ ಕೇಂದ್ರ?
ಖೆಡ್ಡಾ ತೋಡಿದ ಪೊಲೀಸರು
ಆರೋಪಿಗಳ ಕಿರುಕುಳಕ್ಕೆ ಬಗ್ಗದ ಮಹಿಳಾ ಅಧಿಕಾರಿ ಧೈರ್ಯ ತೋರಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಗಂಭೀರತೆ ಅರಿತ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಬಿ.ಆರ್. ಗಡ್ಡೇಕರ್ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಜೈಲಿಗಟ್ಟಿದೆ. ಬಂಧಿತರಿಂದ ಆರು ಹಿಡನ್ ಕ್ಯಾಮೆರಾ, ಪೆನ್ ಡ್ರೈವ್ ಹಾಗೂ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಒಬ್ಬ ಆರ್.ಟಿ.ಐ ಕಾರ್ಯಕರ್ತ ಎಂದು ಹೇಳಿಕೊಂಡು ತಿರುಗುತ್ತಿದ್ದ ಎನ್ನಲಾಗಿದೆ.
ಪೊಲೀಸ್ ಆಯುಕ್ತರ ಎಚ್ಚರಿಕೆ: “ಸಾರ್ವಜನಿಕ ಸ್ಥಳ ಅಥವಾ ಅಪರಿಚಿತರ ಬಗ್ಗೆ ಎಚ್ಚರವಹಿಸಿ. ಯಾರಾದರೂ ಈ ರೀತಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿದರೆ ಹೆದರಬೇಡಿ, ತಕ್ಷಣ ಪೊಲೀಸರನ್ನು ಸಂಪರ್ಕಿಸಿ.” ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರು ಹೇಳಿದ್ದಾರೆ.

