ಕ್ರಾಂತಿಯ ನೆಲದಲ್ಲಿ ದ್ವೇಷದ ಬಿತ್ತನೆ
ಕರ್ನಾಟಕದ ಮಣ್ಣು ಶರಣರ ನಡೆ-ನುಡಿಗಳಿಂದ ಪಾವನವಾದದ್ದು. 12ನೇ ಶತಮಾನದಲ್ಲಿ ಬಸವಣ್ಣನವರು ಕಟ್ಟಿಕೊಟ್ಟ ‘ಅನುಭವ ಮಂಟಪ’ ಕೇವಲ ಒಂದು ಧಾರ್ಮಿಕ ಚೌಕಟ್ಟಾಗಿರಲಿಲ್ಲ; ಅದು ಜಾತಿ, ವರ್ಗ ಮತ್ತು ಲಿಂಗಭೇದವಿಲ್ಲದ ಸಮಾನತೆಯ ಮಹಾನ್ ಪ್ರಯೋಗಶಾಲೆಯಾಗಿತ್ತು. ಆದರೆ, ಶತಮಾನಗಳ ನಂತರ ಇಂದು ಅದೇ ಬಸವ ತತ್ವದ ವಾರಸುದಾರರನ್ನು ಮತ್ತು ಪ್ರಗತಿಪರ ಚಿಂತಕರನ್ನು ಗುರಿಯಾಗಿಸಿಕೊಂಡು ‘ಸನಾತನ’ ಮತ್ತು ‘ಹಿಂದುತ್ವ’ದ ಹೆಸರಿನಲ್ಲಿ ವ್ಯವಸ್ಥಿತ ದಾಳಿಗಳು (Basava vs Sanatana) ನಡೆಯುತ್ತಿವೆ. ಇತ್ತೀಚೆಗೆ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕನ್ನೇರಿ ಶ್ರೀ ನೀಡುತ್ತಿರುವ ಪ್ರಚೋದನಾಕಾರಿ ಭಾಷಣಗಳು ಕೇವಲ ವೈಯಕ್ತಿಕ ನಿಂದನೆಯಲ್ಲ, ಬದಲಾಗಿ ಬಸವಣ್ಣನವರ ವೈಚಾರಿಕ ಅಡಿಪಾಯವನ್ನೇ ಧ್ವಂಸಗೊಳಿಸುವ ಹುನ್ನಾರದಂತೆ ಗೋಚರಿಸುತ್ತಿವೆ.
ವಿವಾದದ ಹಿನ್ನೆಲೆ: ಕಾನೂನು ಕ್ರಮದ ನಂತರವೂ ಬದಲಾಗದ ಧೋರಣೆ
Basava vs Sanatana: ಕನ್ನೇರಿ ಶ್ರೀಯ ಇತಿಹಾಸವು ವಿವಾದಗಳಿಂದಲೇ ಕೂಡಿದೆ. ಈ ಹಿಂದೆ ಲಿಂಗಾಯತ ಚಳವಳಿಯ ಮುಖಂಡರು ಮತ್ತು ಪ್ರಗತಿಪರ ಸ್ವಾಮೀಜಿಗಳ ವಿರುದ್ಧ ಅತ್ಯಂತ ಹಗುರವಾಗಿ ಮತ್ತು ಅಸಂವಿಧಾನಿಕ ಪದಗಳನ್ನು ಬಳಸಿ ಮಾತನಾಡಿದ್ದಕ್ಕಾಗಿ ಅವರಿಗೆ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಿಗೆ ಪ್ರವೇಶ ನಿಷೇಧ ಹೇರಲಾಗಿತ್ತು. ಸುಪ್ರೀಂ ಕೋರ್ಟ್ ಕೂಡ ಅವರ ಭಾಷೆಯ ಬಳಕೆಯನ್ನು ಗಮನಿಸಿ, “ಇವರು ಖಾವಿ ಹಾಕಲು ಯೋಗ್ಯರಲ್ಲ” ಎಂಬ ಅರ್ಥದ ಕಠಿಣ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆದರೆ, ಗಡಿಪಾರಿನ ಅವಧಿ ಮುಗಿದು ಜಿಲ್ಲೆಯೊಳಗೆ ಮರಳಿದ ಶ್ರೀಗಳು, ತಿದ್ದಿಕೊಳ್ಳುವ ಬದಲು ಮತ್ತಷ್ಟು ಆಕ್ರಮಣಕಾರಿ ಶೈಲಿಯಲ್ಲಿ ಬಸವ ಭಕ್ತರ ಮೇಲೆ ಮುಗಿಬಿದ್ದಿದ್ದಾರೆ.
ಬನಹಟ್ಟಿಯಲ್ಲಿ ನಡೆದ ಹಿಂದೂ ಸಮಾವೇಶವು ಕನ್ನೇರಿ ಶ್ರೀ ಅಸಹನೆಯ ಪರಾಕಾಷ್ಠೆಗೆ ಸಾಕ್ಷಿಯಾಯಿತು. ಅಲ್ಲಿ ಅವರು ಬಳಸಿದ “ನೀಚ”, “ನಾಯಿ”, “ಹಂದಿ”, “ತಾಲಿಬಾನ್” ಎಂಬಂತಹ ಪದಗಳು ಒಬ್ಬ ಧಾರ್ಮಿಕ ಮುಖಂಡನ ಬಾಯಲ್ಲಿ ಬರಬೇಕಾದವುಗಳಲ್ಲ. ಇದು ಕೇವಲ ಶಬ್ದಗಳಲ್ಲ, ಸಮಾಜದಲ್ಲಿ ದ್ವೇಷದ ಕಿಡಿ ಹಚ್ಚುವ ಆಯುಧಗಳಾಗಿ ಬಳಕೆಯಾಗಿವೆ.
ಇದನ್ನೂ ಓದಿ: Bagalkot: ರಾಜಕಾರಣದ ‘ಚದುರಂಗ’ದಲ್ಲಿ ಶಿವಾಜಿ ಪ್ರತಿಮೆ: ಅಸ್ಮಿತೆಗಿಂತ ‘ಕ್ರೆಡಿಟ್’ ಸಂಘರ್ಷವೇ ಹೆಚ್ಚು!
ನಿಜಗುಣಾನಂದ ಶ್ರೀಗಳ ಮೇಲೆ ಹಲ್ಲೆಗೆ ಪ್ರಚೋದನೆ: ಒಂದು ವ್ಯವಸ್ಥಿತ ಸಂಚು?
ಕನ್ನೇರಿ ಶ್ರೀ ತನ್ನ ಭಾಷಣದಲ್ಲಿ ಈ ಬಾರಿ ಪ್ರಮುಖವಾಗಿ ಗುರಿಯಾಗಿದ್ದು ನಿಷ್ಠಾವಂತ ಬಸವ ತತ್ವ ಪ್ರಸಾರಕರು ಮತ್ತು ಜ್ಞಾನಯೋಗಿಗಳಾದ ಪೂಜ್ಯ ಶ್ರೀ ನಿಜಗುಣಾನಂದ ಸ್ವಾಮೀಜಿಗಳು. ಸಿದ್ದೇಶ್ವರ ಅಪ್ಪಾಜಿ ಮತ್ತು ಬಸವಣ್ಣನವರ ಭಾವಚಿತ್ರಕ್ಕೆ ಸಂಬಂಧಿಸಿದ ಒಂದು ಸಣ್ಣ ಪ್ರಸಂಗವನ್ನು ಮುಂದಿಟ್ಟುಕೊಂಡು, ಕನ್ನೇರಿ ಶ್ರೀ ತನ್ನ ಭಕ್ತರನ್ನು ಪ್ರಚೋದಿಸುವ ಕೆಲಸ ಮಾಡಿದರು.
“ಸಿದ್ದೇಶ್ವರ ಅಪ್ಪಾರ ಬಗ್ಗೆ ಹಗುರವಾಗಿ ಮಾತಾಡ್ತೀಯಾ ಮಗನ…” ಎಂದು ಏಕವಚನದಲ್ಲಿ ನಿಂದಿಸುತ್ತಾ, “ಮುಂದಿನ ಶಬ್ದ ನಾನು ಮಾತಾಡಬಾರದು, ನೀವು ಮಾಡಬೇಕು… ಎಲ್ಲಿ ಬರ್ತಾನೆ ಅವ ನೀವು ತಯಾರಾಗೇ ಇರಬೇಕು” ಎಂದು ನೆರೆದಿದ್ದ ಯುವಕರಿಗೆ ಕರೆ ನೀಡಿದ್ದು ಹಲ್ಲೆಗೆ ಮುಕ್ತ ಆಹ್ವಾನ ನೀಡಿದಂತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನಿಜಗುಣಾನಂದ ಶ್ರೀಗಳ ಹುಟ್ಟಿನ ಜಾತಿಯನ್ನು ಪ್ರಸ್ತಾಪಿಸಿ ಕನ್ನೇರಿ ಶ್ರೀ ಕ್ಷುಲ್ಲಕವಾಗಿ ಮಾತನಾಡಿದ್ದಾರೆ. “ಹುಟ್ಟಿದ ಜಾತಿಗೆ ಆಗದವನು ಲಿಂಗಾಯತರಿಗೆ ಏನು ಮಾಡಿಯಾನು?” ಎಂಬ ಅವರ ಪ್ರಶ್ನೆಯು ಅವರಲ್ಲಿ ಇನ್ನೂ ಜೀವಂತವಾಗಿರುವ ವರ್ಣಾಶ್ರಮ ಧರ್ಮದ ಮದವನ್ನು ಎತ್ತಿ ತೋರಿಸುತ್ತದೆ.
ಕಲ್ಬುರ್ಗಿ ಹತ್ಯೆಯ ನೆರಳು ಮತ್ತು ‘ಸಂಘ’ ಪರಿವಾರದ ಸ್ಕ್ರಿಪ್ಟ್
ಹಿರಿಯ ಚಿಂತಕ ಟಿ.ಆರ್. ಚಂದ್ರಶೇಖರ್ ಅವರ ವಿಶ್ಲೇಷಣೆಯಂತೆ, ಇದು ಕೇವಲ ಕನ್ನೇರಿ ಶ್ರೀಯ ವೈಯಕ್ತಿಕ ಆಕ್ರೋಶವಲ್ಲ. ಇದರ ಹಿಂದೆ ಒಂದು ವ್ಯವಸ್ಥಿತ “ಸ್ಕ್ರಿಪ್ಟ್” ಅಡಗಿದೆ. ಈ ಹಿಂದೆ ಸಂಶೋಧಕ ಎಂ.ಎಂ. ಕಲ್ಬುರ್ಗಿಯವರನ್ನು ಹೇಗೆ ಗುರಿ ಮಾಡಲಾಗಿತ್ತೋ, ಅದೇ ಮಾದರಿಯನ್ನು ಇಲ್ಲಿ ಅನುಸರಿಸಲಾಗುತ್ತಿದೆ. ಯಾವುದೋ ಒಂದು ಭಾಷಣದ ತುಣುಕನ್ನು ಹಿಡಿದು ಅದನ್ನು ವಿವಾದವಾಗಿಸುವುದು, ನಂತರ ಧರ್ಮದ ಹೆಸರಿನಲ್ಲಿ ಸಾಮಾನ್ಯ ಜನರನ್ನು ರೊಚ್ಚಿಗೆಬ್ಬಿಸುವುದು ಮತ್ತು ಅಂತಿಮವಾಗಿ ಭೌತಿಕ ಹಲ್ಲೆಗೆ ಪ್ರಚೋದಿಸುವುದು—ಇದು ಹಿಂದುತ್ವವಾದಿ ಸಂಘಟನೆಗಳು ಅನುಸರಿಸಿಕೊಂಡು ಬಂದಿರುವ ಹಳೆಯ ಹಾದಿ.
ಕನ್ನೇರಿ ಶ್ರೀ, “ನೀವು ತಯಾರಾಗೇ ಇರಬೇಕು” ಎಂದು ಹೇಳಿ ನಂತರ “ಪ್ರಶ್ನೆ ಮಾಡಲು ತಯಾರಾಗಿ” ಎಂದು ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾರಾದರೂ, ಅದರ ಹಿಂದಿನ ಗೂಢಾರ್ಥವು ಹಿಂಸೆಗೆ ಪ್ರೇರೇಪಿಸುವುದೇ ಆಗಿದೆ. ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಇಂತಹ ‘ದ್ವಂದ್ವಾರ್ಥ’ದ ವಾಕ್ಯಗಳನ್ನು ಬಳಸುವ ತಂತ್ರಗಾರಿಕೆಯನ್ನು ಇಲ್ಲಿ ಕಾಣಬಹುದು.
ನಿಜಗುಣಾನಂದ ಶ್ರೀಗಳ ಸ್ಥಿತಪ್ರಜ್ಞತೆ ಮತ್ತು ಬಸವ ತತ್ವದ ಶಕ್ತಿ
ಇಷ್ಟೆಲ್ಲಾ ವೈಯಕ್ತಿಕ ನಿಂದನೆ ಮತ್ತು ಹಲ್ಲೆಯ ಬೆದರಿಕೆಗಳು ಬಂದರೂ ನಿಜಗುಣಾನಂದ ಶ್ರೀಗಳು ತೋರಿದ ಸಂಯಮ ಬಸವ ತತ್ವದ ಔನ್ನತ್ಯಕ್ಕೆ ಸಾಕ್ಷಿ. ಕನ್ನೇರಿ ಶ್ರೀಯ ಹೇಳಿಕೆಗೆ ಸಂಬಂಧಿಸಿದಂತೆ ಅಸಲಿ ಸುದ್ದಿ ಪ್ರತಿನಿಧಿಯು, ನಿಜಗುಣಾನಂದ ಶ್ರೀಗಳನ್ನು ಪ್ರತಿಕ್ರಿಯೆ ಕೇಳಿದಾಗ ಅವರು, “ಯಾರೋ ಏನೋ ಹೇಳುತ್ತಾರೆ ಎಂದು ನಾನು ಪ್ರತಿಕ್ರಿಯಿಸುವುದಿಲ್ಲ, ನಮ್ಮ ದಾರಿ ಬಸವಣ್ಣನ ದಾರಿ” ಎಂದು ಹೇಳುವ ಮೂಲಕ ದ್ವೇಷಕ್ಕೆ ಪ್ರೀತಿಯೇ ಉತ್ತರ ಎಂಬ ಸಂದೇಶವನ್ನು ನೀಡಿದರು. ಶರಣರು ಕಲಿಸಿದ್ದು ಇದನ್ನೇ—“ತನ್ನವನೆಂದು ಎಣಿಸು”, “ಲೋಕದ ಡೊಂಕ ನೀವೇಕೆ ತಿದ್ದುವಿರಿ?”. ನಿಜಗುಣಾನಂದ ಶ್ರೀಗಳು ಲೋಕದ ಡೊಂಕಿಗಿಂತ ಹೆಚ್ಚಾಗಿ ತತ್ವದ ಪ್ರಸಾರಕ್ಕೆ ಆದ್ಯತೆ ನೀಡುತ್ತಿರುವುದು ಸನಾತನವಾದಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಶಾಸಕ ವಿಜಯಾನಂದ ಕಾಶಪ್ಪನವರ ಖಾರವಾದ ಎಚ್ಚರಿಕೆ
ಲಿಂಗಾಯತ ಚಳವಳಿಯ ಮುಂಚೂಣಿ ನಾಯಕರಾದ ವಿಜಯಾನಂದ ಕಾಶಪ್ಪನವರು ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿಲ್ಲ. ಕಾಶ್ಪಪ್ಪನವರ ಆಕ್ರೋಶದ ನುಡಿಗಳು ಹೀಗಿವೆ:
ಕನ್ನೇರಿ ಸ್ವಾಮಿಗಳಿಗೆ ಮದ ಏರಿದಂತೆ ಕಾಣುತ್ತಿದೆ. ನಾನೇ ಶ್ರೇಷ್ಠ, ನಾನೇ ದೇವರು ಎಂದು ಬೀಗುವ ಇವರು ಆಕಾಶದಿಂದ ಉದುರಿ ಬಂದಿದ್ದಾರೆಯೇ? ಇವರೂ ಕೂಡ ಒಬ್ಬ ಸಾಮಾನ್ಯ ಮನುಷ್ಯನಂತೆ ತಾಯಿಯ ಹೊಟ್ಟೆಯಲ್ಲೇ ಜನ್ಮ ತಾಳಿದವರು. ಖಾವಿ ಬಟ್ಟೆ ಹಾಕಿದ ಮಾತ್ರಕ್ಕೆ ಬಾಯಿಗೆ ಬಂದಂತೆ ಮಾತನಾಡುವ ಹಕ್ಕು ಇವರಿಗೆ ಯಾರು ಕೊಟ್ಟರು? ಇವರಿಗೆ ಅಷ್ಟೊಂದು ತಾಕತ್ತಿದ್ದರೆ ಮೊದಲು ಆ ಖಾವಿ ಬಿಚ್ಚಿಟ್ಟು, ಖಾದಿ ಹಾಕಿಕೊಂಡು ರಾಜಕೀಯ ಅಖಾಡಕ್ಕೆ (ಗ್ರೌಂಡ್) ಬರಲಿ. ಆಗ ನಾವು ಅವರಿಗೆ ಸರಿಯಾದ ಭಾಷೆಯಲ್ಲಿ ಉತ್ತರಿಸುತ್ತೇವೆ.
ಕಾಶಪ್ಪನವರು ಕೇವಲ ರಾಜಕೀಯವಾಗಿ ಅಷ್ಟೇ ಅಲ್ಲದೆ, ಸಾಮಾಜಿಕವಾಗಿಯೂ ಎಚ್ಚರಿಕೆ ನೀಡಿದ್ದಾರೆ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಪದೇ ಪದೇ ಲಿಂಗಾಯತ ತತ್ವಗಳನ್ನು ಹೀಯಾಳಿಸುತ್ತಾ ಹೋದರೆ, ಜನರೇ ಬೀದಿಯಲ್ಲಿ ಅವರಿಗೆ ಪಾಠ ಕಲಿಸುತ್ತಾರೆ. ಬಾಯಿಗೆ ಬಂದಂತೆ ಮಾತನಾಡಿದ್ರೆ ಬಡಿಸಿಕೊಳ್ಳುವ ಕಾಲ ಹತ್ತಿರದಲ್ಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಸೈದ್ಧಾಂತಿಕ ಸಂಘರ್ಷ: ಬಸವ ತತ್ವ vs ಸನಾತನ ವಾದ
ಈ ಇಡೀ ವಿವಾದದ ತಿರುಳು ಇರುವುದು ಸೈದ್ಧಾಂತಿಕ ಸಂಘರ್ಷದಲ್ಲಿ.
- ಬಸವ ತತ್ವ: ಲಿಂಗಾಯತ ಧರ್ಮವನ್ನು ಒಂದು ಸ್ವತಂತ್ರ, ವೈಚಾರಿಕ ಮತ್ತು ವೈಜ್ಞಾನಿಕ ಧರ್ಮವಾಗಿ ನೋಡುತ್ತದೆ. ಇದು ಪುರೋಹಿತಶಾಹಿ ಮತ್ತು ಶ್ರೇಣೀಕೃತ ವ್ಯವಸ್ಥೆಯನ್ನು ನಿರಾಕರಿಸುತ್ತದೆ.
- ಸನಾತನ ವಾದ: ಲಿಂಗಾಯತವನ್ನು ಹಿಂದೂ ಧರ್ಮದ ಒಂದು ಶಾಖೆಯನ್ನಾಗಿ ಸೀಮಿತಗೊಳಿಸಲು ಬಯಸುತ್ತದೆ. ಇಲ್ಲಿ ವರ್ಣಾಶ್ರಮ ಮತ್ತು ಸಂಪ್ರದಾಯಗಳಿಗೆ ಮೊದಲ ಆದ್ಯತೆ.
ಕನ್ನೇರಿ ಶ್ರೀಗಳಂತಹವರು ಸನಾತನ ಧರ್ಮದ ರಕ್ಷಕರ ಸೋಗಿನಲ್ಲಿ ಬಸವ ತತ್ವವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಲಿಂಗಾಯತರಲ್ಲಿ ಜಾಗೃತಿ ಮೂಡಿಸುತ್ತಿರುವ ನಿಜಗುಣಾನಂದ ಶ್ರೀಗಳಂತಹವರನ್ನು ಸೈದ್ಧಾಂತಿಕವಾಗಿ ಎದುರಿಸಲು ಸಾಧ್ಯವಾಗದಿದ್ದಾಗ, ಇಂತಹ ಕೀಳುಮಟ್ಟದ ನಿಂದನೆ ಮತ್ತು ಹಿಂಸೆಯ ಪ್ರಚೋದನೆಯ ಹಾದಿ ಹಿಡಿಯುತ್ತಿದ್ದಾರೆ.
ಇದನ್ನೂ ಓದಿ: Controversy: ‘ಡಾಗ್’ ಸತೀಶ್ ವಿಕೃತ ಮನಸ್ಥಿತಿಗೆ ಬೇಕಿದೆ ಕಾನೂನಿನ ಬಿಸಿ!
ಸರ್ಕಾರದ ಜವಾಬ್ದಾರಿ ಮತ್ತು ಸಮಾಜದ ನಡೆಯೇನು?
ಒಬ್ಬ ವ್ಯಕ್ತಿ ಬಹಿರಂಗವಾಗಿ ಮತ್ತೊಬ್ಬ ಧರ್ಮಗುರುವಿನ ಮೇಲೆ ಹಲ್ಲೆಗೆ ಪ್ರಚೋದನೆ ನೀಡುತ್ತಿರುವುದು ಕಾನೂನು ಸುವ್ಯವಸ್ಥೆಗೆ ಸವಾಲಾಗಿದೆ. ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕೇವಲ ನಿಷೇಧಾಜ್ಞೆ ಜಾರಿಗೊಳಿಸುವುದಲ್ಲದೆ, ಸಮಾಜದ ಶಾಂತಿ ಕದಡುವ ಇಂತಹ ವ್ಯಕ್ತಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಪ್ರಗತಿಪರ ಸಂಘಟನೆಗಳು ಮತ್ತು ಬಸವ ಭಕ್ತರು ಈ ಹಂತದಲ್ಲಿ ಒಗ್ಗಟ್ಟಾಗಬೇಕಿದೆ. ನಿಜಗುಣಾನಂದ ಶ್ರೀಗಳ ರಕ್ಷಣೆಯು ಕೇವಲ ಒಬ್ಬ ವ್ಯಕ್ತಿಯ ರಕ್ಷಣೆಯಲ್ಲ, ಅದು ಬಸವಣ್ಣನವರ ವೈಚಾರಿಕತೆಯ ರಕ್ಷಣೆ. ಉತ್ತರ ಕರ್ನಾಟಕದ ಜನತೆ ಇಂತಹ ಪ್ರಚೋದನಾಕಾರಿ ಶಕ್ತಿಗಳಿಗೆ ಬಲಿಯಾಗದೆ, ಶರಣರ ತತ್ವದಂತೆ ಶಾಂತಿ ಮತ್ತು ಪ್ರಬುದ್ಧತೆಯಿಂದ ವರ್ತಿಸಬೇಕಿದೆ.
ಖಾವಿ ಎಂಬುದು ತ್ಯಾಗ ಮತ್ತು ಕರುಣೆಯ ಸಂಕೇತ. ಆದರೆ ಕನ್ನೇರಿ ಶ್ರೀಗಳಂತಹವರ ಕೈಯಲ್ಲಿ ಅದು ದರ್ಪ ಮತ್ತು ದ್ವೇಷದ ಸಾಧನವಾಗಿ ಬಳಕೆಯಾಗುತ್ತಿರುವುದು ದುರದೃಷ್ಟಕರ. ಬಸವ ಪಥದಲ್ಲಿ ನಡೆಯುವವರಿಗೆ ಇಂತಹ ಸಾವಿರಾರು ಸವಾಲುಗಳು ಎದುರಾಗಬಹುದು. ಆದರೆ, ‘ಸತ್ಯಕ್ಕೆ ಸಾವಿಲ್ಲ’ ಎಂಬಂತೆ, ಬಸವ ತತ್ವದ ಬೆಳಕು ಇಂತಹ ಸನಾತನ ಕತ್ತಲೆಯನ್ನು ಸರಿಸಿಯೇ ತೀರುತ್ತದೆ. ಪ್ರಜ್ಞಾವಂತ ಸಮಾಜವು ದ್ವೇಷ ಹರಡುವವರನ್ನು ಗುರುತಿಸಿ ಅವರಿಗೆ ತಕ್ಕ ಪಾಠ ಕಲಿಸಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ.

