ದೇಶದ ಜನಸಾಮಾನ್ಯರು ಬೆಲೆ ಏರಿಕೆಯ ಬೇಗುದಿಯಲ್ಲಿ ಬೆಂದು ಹೋಗುತ್ತಿದ್ದಾರೆ. ಯುವಕರು ಉದ್ಯೋಗವಿಲ್ಲದೆ ಬೀದಿ ಬೀದಿ ಅಲೆಯುತ್ತಿದ್ದಾರೆ. ದೇಶದ ಆರ್ಥಿಕತೆಯ ಗಾಲಿಯೇ ಕಳಚಿ ಬಿದ್ದಿದೆಯೇನೋ ಎನ್ನುವ ಭೀತಿ ಆವರಿಸಿದೆ. ಇಂತಹ ಮಹಾ ಬಿಕ್ಕಟ್ಟಿನ ಹೊತ್ತಿನಲ್ಲಿ ದೇಶವನ್ನು ಮುನ್ನಡೆಸಬೇಕಾದ ಜವಾಬ್ದಾರಿಯುತ ಪ್ರಧಾನಿ ನರೇಂದ್ರ ಮೋದಿ (Narendra Modi) ಏನು ಮಾಡುತ್ತಿದ್ದಾರೆ ಗೊತ್ತೇ? ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Georgia Meloni) ಎದುರು ನಿಂತು ‘ಮೆಲೋಡಿ’ ಚಾಕಲೇಟ್ ಪಾಕೆಟ್ ಕೈಯಲ್ಲಿ ಹಿಡಿದು, ಹಲ್ಲು ಕಿರಿಯುತ್ತಾ ಸೋಶಿಯಲ್ ಮಿಡಿಯಾದಲ್ಲಿ ರೀಲ್ಸ್ ಮಾಡುತ್ತಿದ್ದಾರೆ! ಹೌದು, ಇದು ಇಂದಿನ ಭಾರತದ ಅತ್ಯಂತ ಕಹಿ ಮತ್ತು ಕ್ರೂರ ವಾಸ್ತವ.
Thank you for the gift pic.twitter.com/7ePxbJwPbA
— Giorgia Meloni (@GiorgiaMeloni) May 20, 2026
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಅಮೇಥಿಯ ಸಭೆಯೊಂದರಲ್ಲಿ ಈ ದೃಶ್ಯವನ್ನು ಇಟ್ಟುಕೊಂಡು ದೇಶದ ಪ್ರಧಾನಿಯವರ ಬೇಜವಾಬ್ದಾರಿತನವನ್ನು ಕಟುವಾಗಿ ಲೇವಡಿ ಮಾಡಿದ್ದಾರೆ. “ದೇಶದ ಜನರಿಗೆ ಪೆಟ್ರೋಲ್ ಕಡಿಮೆ ಬಳಸಿ, ಬಂಗಾರ ಕೊಳ್ಳಬೇಡಿ, ಆರ್ಥಿಕ ಬಿರುಗಾಳಿ ಬರುತ್ತಿದೆ ಎಂದು ಬುದ್ಧಿ ಹೇಳುವ ಪ್ರಧಾನಿ, ತಾವು ಮಾತ್ರ ಕೋಟ್ಯಂತರ ರೂಪಾಯಿ ವೆಚ್ಚದ ಐಷಾರಾಮಿ ವಿಮಾನವೇರಿ ಇಟಲಿಗೆ ಹೋಗಿ ಚಾಕಲೇಟ್ ಹಂಚುತ್ತಿದ್ದಾರೆ” ಎಂದು ರಾಹುಲ್ ಚುಚ್ಚಿದ್ದಾರೆ. ಈ ಮಾತುಗಳು ಕೇವಲ ವಿರೋಧ ಪಕ್ಷದ ರಾಜಕೀಯ ಟೀಕೆಯಲ್ಲ, ಇದು ಇವತ್ತು ಹಸಿದ ಹೊಟ್ಟೆಯಲ್ಲಿ ಮಲಗುತ್ತಿರುವ ಕೋಟ್ಯಂತರ ಭಾರತೀಯರ ಎದೆಯಾಳದ ಆಕ್ರೋಶ.
आर्थिक तूफ़ान सर पर है, और हमारे प्रधानमंत्री इटली में टॉफ़ी बाँट रहे हैं!
किसान, युवा, महिलाएँ, मज़दूर और छोटे व्यापारी सब रो रहे हैं – PM हंसकर रील बना रहे हैं, और BJP वाले ताली बजा रहे हैं।
यह नेतृत्व नहीं, नौटंकी है।
— Rahul Gandhi (@RahulGandhi) May 20, 2026
ಪ್ರಚಾರದ ಅಬ್ಬರದಲ್ಲಿ ದೇಶದ ಹಿತ ಬಲಿ!
ಇವತ್ತು ಇಡೀ ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿತನದ ಅಂಚಿಗೆ ಬಂದು ನಿಂತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿಯ ಮೌಲ್ಯ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದೆ. ಜಿಡಿಪಿ ಬೆಳವಣಿಗೆಯ ಗ್ರಾಫ್ ಕೆಳಕ್ಕೆ ಮುಖ ಮಾಡಿದೆ. ದೇಶದ ಬೆನ್ನೆಲುಬಾಗಿದ್ದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬಂಡವಾಳವಿಲ್ಲದೆ, ಸರ್ಕಾರದ ತಪ್ಪು ನೀತಿಗಳಿಂದಾಗಿ ಒಂದೊಂದಾಗಿ ಮುಚ್ಚಿ ಹೋಗುತ್ತಿವೆ. ಜನಸಾಮಾನ್ಯರ ಕೈಯಲ್ಲಿ ಕಾಸಿಲ್ಲ. ದಿನಬಳಕೆಯ ವಸ್ತುಗಳ ಬೆಲೆ ಗಗನ ಮುಟ್ಟಿದೆ. ಬಡವನ ತಟ್ಟೆಯಿಂದ ತರಕಾರಿ, ಬೇಳೆ-ಕಾಳುಗಳು ಮಾಯವಾಗುತ್ತಿವೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಒಬ್ಬ ದೇಶದ ನಾಯಕನಿಗೆ (Narendra Modi) ಇರಬೇಕಾದ ಕನಿಷ್ಠ ವಿವೇಚನೆ ಎಲ್ಲಿದೆ?
ಅಂತರರಾಷ್ಟ್ರೀಯ ವೇದಿಕೆಗಳು ಎನ್ನುವುದು ದೇಶದ ರಾಜತಾಂತ್ರಿಕತೆ, ಆರ್ಥಿಕ ಒಪ್ಪಂದಗಳು ಮತ್ತು ಜಾಗತಿಕ ಸಮಸ್ಯೆಗಳ ಚರ್ಚೆಗೆ ಇರುವ ಜಾಗಗಳೇ ಹೊರತು, ಇನ್ಸ್ಟಾಗ್ರಾಮ್ ರೀಲ್ಸ್ಗಳಿಗೆ ಕಂಟೆಂಟ್ ಹುಡುಕುವ ಶೂಟಿಂಗ್ ಸ್ಪಾಟ್ಗಳಲ್ಲ. ದೇಶದ ಗಂಭೀರ ಮುತ್ಸದ್ದಿಯಾಗಬೇಕಾದ ಪ್ರಧಾನಿ, ಕೇವಲ ಸೋಶಿಯಲ್ ಮೀಡಿಯಾದ ‘ಲೈಕ್ಸ್’ ಮತ್ತು ‘ವೀವ್ಸ್’ಗಾಗಿ ಹಪಾಹಪಿಸುತ್ತಿರುವುದು ದೇಶದ ಘನತೆಗೆ ತಂದಿಟ್ಟ ಬಹುದೊಡ್ಡ ಕುಂದು. ವಿದೇಶಿ ನಾಯಕಿಯ ಜೊತೆ ನಿಂತು ಕ್ಯಾಮೆರಾ ಮುಂದೆ ಪೋಸ್ ಕೊಡುವುದರಿಂದ ದೇಶದ ಹಣೆಬರಹ ಬದಲಾಗುವುದಿಲ್ಲ ಎನ್ನುವ ಕನಿಷ್ಠ ಜ್ಞಾನವೂ ನಮ್ಮನ್ನಾಳುವವರಿಗೆ ಇಲ್ಲದಿರುವುದು ದುರಂತ.
ಇದನ್ನೂ ಓದಿ: Cockroach: ಸಿಜೆಐ ಸಾಹೇಬರೇ, ಯುವಕರು ‘ಜಿರಳೆಗಳಾದರೆ’ ಸಿಸ್ಟಮ್ ಅನ್ನ ಚರಂಡಿ ಮಾಡಿದ್ದು ಯಾರು?
ಜನರ ಕಣ್ಣೀರು ಮತ್ತು ಪ್ರಧಾನಿಯ ಐಷಾರಾಮಿ ಮೋಜು
ದೇಶದ ಜನರಿಗೆ ತ್ಯಾಗದ ಪಾಠ ಪ್ರವಚನ ಮಾಡುವ ಫಕೀರ [ಮೋದಿ, (Narendra Modi)], ತನ್ನ ಐಷಾರಾಮಿ ತನಕ್ಕೆ ಮಾತ್ರ ಎಲ್ಲೂ ಬ್ರೇಕ್ ಹಾಕುತ್ತಿಲ್ಲ. “ಪೆಟ್ರೋಲ್ ಬಳಸಬೇಡಿ, ಸೈಕಲ್ ತುಳಿಯಿರಿ, ಎಲೆಕ್ಟ್ರಿಕ್ ಗಾಡಿ ಕೊಳ್ಳಿ” ಎಂದು ಜನರಿಗೆ ಸಲಹೆ ನೀಡುವ ಇವರು, ತಾವು ಮಾತ್ರ ಮೂರು-ನಾಲ್ಕು ಸಾವಿರಕೋಟಿ ರೂಪಾಯಿ ವೆಚ್ಚದ ಅಲ್ಟ್ರಾ-ಲಕ್ಸುರಿ ವಿಮಾನಗಳನ್ನು ಬಳಸುತ್ತಾರೆ. ಜನರ ತೆರಿಗೆ ಹಣದಲ್ಲಿ ಇಂತಹ ಐಷಾರಾಮಿ ವಿಮಾನ ಹತ್ತಿ ವಿದೇಶಕ್ಕೆ ಹಾರುವ ಪ್ರಧಾನಿ, ಅಲ್ಲಿಗೆ ಹೋಗಿ ಮಾಡುವ ಸಾಧನೆ ಏನು? ಜಿ ಸೆವೆನ್ (G7) ಶೃಂಗಸಭೆಯಂತಹ ಗಂಭೀರ ವೇದಿಕೆಯಲ್ಲಿ ಜಾಗತಿಕ ನಾಯಕರೊಂದಿಗೆ ದೇಶದ ಆರ್ಥಿಕತೆಗೆ ಪೂರಕವಾಗುವ ಚರ್ಚೆ ನಡೆಸುವ ಬದಲು, ಜೇಬಿನಲ್ಲಿ ಮೆಲೋಡಿ ಚಾಕಲೇಟ್ ಪಾಕೆಟ್ ಇಟ್ಟುಕೊಂಡು ಹೋಗಿ ರೀಲ್ಸ್ ಮಾಡುವುದು ಎಂತಹ ಬೌದ್ಧಿಕ ದಿವಾಳಿತನ?
ಸಾಮಾನ್ಯ ನಾಗರಿಕ ಇವತ್ತು ಒಂದು ಲೀಟರ್ ಹಾಲಿಗೆ, ಒಂದು ಕೆಜಿ ಅಕ್ಕಿಗೆ ಹತ್ತು ಬಾರಿ ಯೋಚನೆ ಮಾಡುವ ಪರಿಸ್ಥಿತಿ ಇದೆ. ಮಧ್ಯಮ ವರ್ಗದ ಜನ ತಮ್ಮ ಮಕ್ಕಳ ಶಾಲಾ ಫೀಸ್ ಕಟ್ಟಲಾಗದೆ, ಆಸ್ಪತ್ರೆ ಖರ್ಚು ನಿಭಾಯಿಸಲಾಗದೆ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ರೈತರು ಬೆಳೆದ ಬೆಳೆಗೆ ಬೆಲೆಯಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಡೀ ದೇಶವೇ ಇಂತಹ ಸಾಲು ಸಾಲು ಕಣ್ಣೀರಿನ ಕಥೆಗಳ ಮೇಲೆ ಕೂತಿರುವಾಗ, ದೇಶದ ಪ್ರಧಾನಿ ವಿದೇಶಿ ನಾಯಕಿಯೊಂದಿಗೆ ಹಲ್ಲು ಕಿರಿಯುತ್ತಾ ನಿಂತಿರುವುದು ಇಡೀ ದೇಶದ ಜನತೆಗೆ ಮಾಡುತ್ತಿರುವ ಪರಮ ಅವಮಾನ. ಇದು ಜನರ ಸಂಕಷ್ಟಗಳ ಮೇಲಿನ ಕ್ರೂರ ಅಣಕವಲ್ಲದೆ ಮತ್ತೇನು?
ನೈಜ ಸಮಸ್ಯೆಗಳಿಂದ ಗಮನ ತಿರುಗಿಸುವ ತಂತ್ರ
ಇದು ಕೇವಲ ಪ್ರಚಾರದ ಹುಚ್ಚಷ್ಟೇ ಅಲ್ಲ, ಇದರ ಹಿಂದೆ ಒಂದು ವ್ಯವಸ್ಥಿತ ರಾಜಕೀಯ ತಂತ್ರವೂ ಅಡಗಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಸೋತಾಗ, ಬೆಲೆ ಏರಿಕೆ ನಿಯಂತ್ರಿಸಲು ಸಾಧ್ಯವಾಗದಿದ್ದಾಗ, ಹಸಿವು ಮತ್ತು ಬಡತನದ ಸೂಚ್ಯಂಕದಲ್ಲಿ ದೇಶ ದಿನದಿಂದ ದಿನಕ್ಕೆ ಹಿಂದೆ ಬೀಳುತ್ತಿರುವಾಗ, ಜನರ ಗಮನವನ್ನು ಈ ನೈಜ ಆರ್ಥಿಕ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯಲು ಇಂತಹ ಕೀಳುಮಟ್ಟದ ಸ್ಟಂಟ್ಗಳನ್ನು ಬಳಸಲಾಗುತ್ತದೆ. ದೇಶದ ಮುಖ್ಯವಾಹಿನಿ ಮಾಧ್ಯಮಗಳು ಕೂಡ ದೇಶದ ನಿರುದ್ಯೋಗದ ಬಗ್ಗೆ ಚರ್ಚಿಸುವ ಬದಲು, “ಮೋದಿ-ಮೆಲೋನಿ ಕೆಮಿಸ್ಟ್ರಿ ಸೂಪರ್” ಎಂದು ದಿನವಿಡೀ ಜಬರ್ದಸ್ತ್ ಸುದ್ದಿ ಬಿತ್ತರಿಸುತ್ತವೆ. ಇದು ದೇಶದ ಜನರಿಗೆ ಉಣಿಸುತ್ತಿರುವ ಅಫೀಮು.
ಒಂದು ಕಾಲದಲ್ಲಿ “ಮೆಲೋಡಿ ಇತ್ನಿ ಚಾಕೊಲೇಟಿ ಕ್ಯು ಹೈ?” (ಮೆಲೋಡಿ ಇಷ್ಟೊಂದು ಚಾಕಲೇಟ್ ಮಯ ಯಾಕೆ?) ಎಂಬ ಜಾಹೀರಾತು ತುಂಬ ಪ್ರಸಿದ್ಧವಾಗಿತ್ತು. ಆದರೆ ಇಂದು ಭಾರತದ ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯೂ ಪ್ರಧಾನಿಯನ್ನು ಕೇಳಬೇಕಿದೆ: “ದೇಶದ ಆರ್ಥಿಕತೆ ಇಷ್ಟೊಂದು ಕಂಗೆಟ್ಟಿರುವಾಗ, ಜನರ ಬದುಕು ಇಷ್ಟೊಂದು ಕಹಿಯಾಗಿರುವಾಗ, ನಿಮಗೆ ಮಾತ್ರ ಈ ‘ಮೆಲೋಡಿ’ಯ ಸಿಹಿ ಮತ್ತು ಮೋಜು ಯಾಕೆ ಪ್ರಧಾನಿಯವರೇ?”.
ಎಚ್ಚರಗೊಳ್ಳಬೇಕಿದೆ ಜನಸಾಮಾನ್ಯ
ಕೇವಲ ಭಾಷಣಗಳಿಂದ, ಪ್ರಚಾರದ ಗಿಮಿಕ್ಗಳಿಂದ ಅಥವಾ ಸೋಷಿಯಲ್ ಮೀಡಿಯಾ ರೀಲ್ಸ್ಗಳಿಂದ ದೇಶದ ಹಸಿದ ಹೊಟ್ಟೆ ತುಂಬಲು ಸಾಧ್ಯವಿಲ್ಲ. ತಾಂತ್ರಿಕ ಪದಗಳ ಭ್ರಮೆಯನ್ನು ಸೃಷ್ಟಿಸಿ ದೇಶ ಮುನ್ನಡೆಯುತ್ತಿದೆ ಎಂದು ಸುಳ್ಳು ಹೇಳುವ ಸರ್ಕಾರಕ್ಕೆ ಈ ಚಾಕಲೇಟ್ ರೀಲ್ಸ್ ಕನ್ನಡಿ ಹಿಡಿದಿದೆ. ಅರಮನೆಯಲ್ಲಿ ಕೂತ ಮಹಾರಾಜನಿಗೆ ಬೀದಿಯಲ್ಲಿರುವ ಬಡವನ ಹಸಿವಿನ ನೋವು ಅರ್ಥವಾಗುವುದಿಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.
ಇನ್ನಾದರೂ ದೇಶದ ಜನತೆ ಇಂತಹ ಕಣ್ಣೊರೆಸುವ ತಂತ್ರಗಳನ್ನು, ಪಿಆರ್ (PR) ಸ್ಟಂಟ್ಗಳನ್ನು ನೋಡಿ ಚಪ್ಪಾಳೆ ತಟ್ಟುವುದನ್ನು ನಿಲ್ಲಿಸಬೇಕಿದೆ. ಪ್ರಧಾನಿಯವರ ನಗುವಿನ ಹಿಂದೆ ದೇಶದ ಆರ್ಥಿಕತೆಯ ಅಳು ಅಡಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಸರ್ಕಾರ ಇಂತಹ ಬಾಲಿಶ ರೀಲ್ಸ್ ಸಂಸ್ಕೃತಿಯಿಂದ ಹೊರಬಂದು, ದೇಶದ ನೈಜ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಗಂಭೀರ ಮತ್ತು ದೃಢ ಕ್ರಮಗಳನ್ನು ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕತೆ ಸಂಪೂರ್ಣವಾಗಿ ಸರ್ವನಾಶವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ದೇಶದ ಹಣೆಬರಹ ಬದಲಾಗಬೇಕಾದರೆ ಪ್ರಧಾನಿಯವರ ರೀಲ್ಸ್ ಬದಲಾಗಬೇಕಿಲ್ಲ, ಅವರ ಆದ್ಯತೆಗಳು ಬದಲಾಗಬೇಕಿದೆ!

