Homeಸುದ್ದಿಗಳುರಾಷ್ಟ್ರೀಯCockroach Janta Party: ಸಿಜೆಐ ಹೇಳಿಕೆ ವಿರುದ್ಧ ಬಂಡಾಯ; ಸೋಷಿಯಲ್‌ ಮೀಡಿಯಾದಲ್ಲಿ ಧೂಳ್‌ ಎಬ್ಬಿಸಿದ ಯುವಜನಾಂಗ!...

Cockroach Janta Party: ಸಿಜೆಐ ಹೇಳಿಕೆ ವಿರುದ್ಧ ಬಂಡಾಯ; ಸೋಷಿಯಲ್‌ ಮೀಡಿಯಾದಲ್ಲಿ ಧೂಳ್‌ ಎಬ್ಬಿಸಿದ ಯುವಜನಾಂಗ! ಪ್ರಭುತ್ವಕ್ಕೆ ನಡುಕ ಶುರು…

Cockroach Janta Party: ದೇಶದ ಅತ್ಯುನ್ನತ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಪೀಠದಿಂದ ಇಂತಹದೊಂದು ಅಸಹ್ಯಕರ ಹೋಲಿಕೆ ಹೊರಬೀಳಬಹುದು ಎಂದು ದೇಶದ ಯಾವೊಬ್ಬ ಸುಶಿಕ್ಷಿತ ಯುವಕನೂ ಯೋಚಿಸಿರಲಿಲ್ಲ. ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ನಕಲಿ ಕಾನೂನು ಪದವಿಗಳಿಗೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ನಡೆಯುತ್ತಿದ್ದಾಗ, ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರು ಆಡಿದ ಮಾತುಗಳು ದೇಶದ ಕೋಟ್ಯಂತರ ನಿರುದ್ಯೋಗಿ ಯುವಕರ ಸ್ವಾಭಿಮಾನದ ಮೇಲೆ ಪ್ರಭುತ್ವ ಎಸೆದ ಆಸಿಡ್‌ನಂತೆ ಕೆಲಸ ಮಾಡಿದೆ.

“ಕೆಲಸವಿಲ್ಲದೆ ಜಿರಳೆಗಳಂತೆ ಓಡಾಡುವ ಯುವಕರು ಮಾಧ್ಯಮಗಳಲ್ಲೋ, ಸಾಮಾಜಿಕ ಜಾಲತಾಣಗಳಲ್ಲೋ ಅಥವಾ ಆರ್‌ಟಿಐ ಕಾರ್ಯಕರ್ತರಾಗಿಯೋ ಎಲ್ಲರನ್ನೂ ಆಕ್ರಮಣ ಮಾಡುತ್ತಿದ್ದಾರೆ, ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ” ಎಂಬ ಅರ್ಥದ ಅವರ ಹೇಳಿಕೆ ಇಡೀ ವ್ಯವಸ್ಥೆಯ ದರ್ಪವನ್ನು ಜಗತ್ತಿನ ಮುಂದೆ ಬೆತ್ತಲು ಮಾಡಿದೆ. ತಾವು ಆಡಿದ ಮಾತುಗಳು ದೇಶಾದ್ಯಂತ ಕಿಚ್ಚು ಹೊತ್ತಿಸುತ್ತಿದ್ದಂತೆ ಹೆಚ್ಚೆತ್ತ ಸಿಜೆಐ, “ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ನಾನು ನಕಲಿ ಪದವಿ ಪಡೆದವರ ಬಗ್ಗೆ ಹೇಳಿದ್ದೇನೆಯೇ ಹೊರತು ಪ್ರಾಮಾಣಿಕ ನಿರುದ್ಯೋಗಿ ಯುವಕರನ್ನಲ್ಲ” ಎಂದು ಸ್ಪಷ್ಟೀಕರಣ ನೀಡಿದರೂ ಸಹ ದೇಶದ ಯುವಮನಸ್ಸುಗಳ ಆಕ್ರೋಶ ತಣ್ಣಗಾಗಿಲ್ಲ. ಗಾಯದ ಮೇಲೆ ಉಪ್ಪು ಸವರಿದಂತಾದ ತರುಣ ಜನಾಂಗ ಪ್ರಭುತ್ವದ ಈ ಅಹಂಕಾರದ ವಿರುದ್ಧ ಸಾರಿದ ಡಿಜಿಟಲ್ ಯುದ್ಧವೇ—“ಕಾಕ್ರಾಚ್ ಜನತಾ ಪಾರ್ಟಿ” (Cockroach Janta Party – CJP)!

ಇದನ್ನೂ ಓದಿ:  Narendra Modi: ಮಾಧ್ಯಮ ಕಂಡ್ರೆ ಮೋದಿಗೆ ಯಾಕಿಷ್ಟು ಭಯ? ಪತ್ರಕರ್ತೆ ಪ್ರಶ್ನೆಗೆ ಉತ್ತರಿಸದೇ ಓಡಿಹೋದ ಪ್ರಧಾನಿ; ಜಗತ್ತಿನೆದುರು ಬೆತ್ತಲಾದ ವಿಶ್ವಗುರು!

ಆಕ್ರೋಶದ ಕಿಚ್ಚು ಹಚ್ಚಿದ ಆ ಒಂದು ಟ್ವೀಟ್!

ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗ (Public Relations Department)ದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿ ಅಭಿಜೀತ್ ದೀಪ್ಕೆ ಎಂಬಾತ ಎಕ್ಸ್ (ಟ್ವಿಟರ್) ವೇದಿಕೆಯಲ್ಲಿ ಪ್ರಭುತ್ವದ ಈ ದರ್ಪದ ವಿರುದ್ಧ ಒಂದು ಮಾರ್ಮಿಕವಾದ ಪ್ರಶ್ನೆ ಎಸೆದ. “ಎಲ್ಲಾ ಜಿರಳೆಗಳು ಒಂದಾದರೆ ಏನಾಗಬಹುದು?” ಎಂಬ ಆತನ ಒಂದು ಸಾಲಿನ ವ್ಯಂಗ್ಯ, ದೇಶದ ಮೂಲೆ ಮೂಲೆಗಳಲ್ಲಿ ಉದ್ಯೋಗವಿಲ್ಲದೆ, ವರ್ಷಗಟ್ಟಲೆ ಓದಿದರೂ ಪರೀಕ್ಷಾ ಪೇಪರ್ ಲೀಕ್ ಹಗರಣಗಳಿಂದ ಭವಿಷ್ಯ ಕಳೆದುಕೊಂಡು ಕತ್ತಲಲ್ಲಿ ಕೂತಿದ್ದ ಸಹಸ್ರಾರು ಯುವಕರ ಎದೆಯೊಳಗಿನ ಆಕ್ರೋಶಕ್ಕೆ ಕಿಡಿ ಇಟ್ಟಿತು.

ಕೇವಲ ಒಂದು ಹಾಸ್ಯ ಅಥವಾ ಮೀಮ್ ಆಗಿ ಆರಂಭವಾದ ಈ ಡಿಜಿಟಲ್ ಆಂದೋಲನ ಕೇವಲ 48 ಗಂಟೆಗಳಲ್ಲಿ ದೇಶದ ಅತ್ಯಂತ ಪ್ರಭಾವಶಾಲಿ ರಾಜಕೀಯ ಆಂದೋಲನದ ಸ್ವರೂಪ ಪಡೆದುಕೊಂಡಿತು. ಮೇ 16 ರಂದು ಈ ಯುವಪಡೆ ‘ಜಿರಳೆ ಜನತಾ ಪಾರ್ಟಿ’ ಹೆಸರಿನಲ್ಲಿ ತನ್ನದೇ ಆದ ಅಧಿಕೃತ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳ ಪುಟಗಳನ್ನು ಮುಕ್ತಗೊಳಿಸಿತು. “ಸೋಮಾರಿಗಳ ಮತ್ತು ನಿರುದ್ಯೋಗಿಗಳ ಧ್ವನಿ” ಎಂಬ ಟ್ಯಾಗ್‌ಲೈನ್‌ ಇಟ್ಟುಕೊಂಡು ಹೊರಹೊಮ್ಮಿದ ಈ ಸಂಘಟನೆ, ಕೇವಲ ಹಾಸ್ಯಕ್ಕೆ ಸೀಮಿತವಾಗಿಲ್ಲ; ಬದಲಿಗೆ ಇದು ವ್ಯವಸ್ಥೆಯ ಕ್ರೂರ ಮತ್ತು ಅಸೂಕ್ಷ್ಮ ಮುಖಕ್ಕೆ ಯುವಜನತೆ ಹಿಡಿದ ಕನ್ನಡಿಯಾಗಿದೆ.

ವ್ಯವಸ್ಥೆಯ ತಳಹದಿ ನಡುಗಿಸುತ್ತಿರುವ ‘ಜಿರಳೆ ಪ್ರಣಾಳಿಕೆ’

ಈ ಪಾರ್ಟಿ ತನ್ನನ್ನು ತಾನು “ಜಾತ್ಯತೀತ, ಸಮಾಜವಾದಿ, ಪ್ರಜಾಸತ್ತಾತ್ಮಕ ಮತ್ತು ಸೋಮಾರಿ” ರಾಜಕೀಯ ವೇದಿಕೆ ಎಂದು ಕರೆದುಕೊಂಡಿದೆ. ಮಹಾತ್ಮಾ ಗಾಂಧಿ, ಬಿ.ಆರ್. ಅಂಬೇಡ್ಕರ್ ಮತ್ತು ಜವಾಹರಲಾಲ್ ನೆಹರೂ ಅವರ ಸಾಂವಿಧಾನಿಕ ಆಶಯಗಳೇ ನಮಗೆ ಪ್ರೇರಣೆ ಎಂದು ಘೋಷಿಸಿಕೊಂಡಿರುವ ಈ ಯುವಪಡೆ, ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ ವೇದಿಕೆಗಳಲ್ಲಿ ಹತ್ತಾರು ಸಾವಿರ ಯುವಕರನ್ನು ತನ್ನತ್ತ ಸೆಳೆಯುತ್ತಿದೆ.

‘ಜಿರಳೆ ಜನತಾ ಪಾರ್ಟಿ’ ಬಿಡುಗಡೆ ಮಾಡಿರುವ ಪ್ರಣಾಳಿಕೆ ಮೇಲ್ನೋಟಕ್ಕೆ ತಮಾಷೆಯಾಗಿ ಕಂಡರೂ, ಅದರ ಆಳದಲ್ಲಿ ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆಯ ಭ್ರಷ್ಟಾಚಾರದ ವಿರುದ್ಧ ಕಹಿಯಾದ ಚಾಟಿ ಏಟುಗಳಿವೆ. ಅವರ ಪ್ರಮುಖ ಬೇಡಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಪ್ರಭುತ್ವಕ್ಕೆ ಯಾಕೆ ನಡುಕ ಶುರುವಾಗಿದೆ ಎಂಬುದು ಅರ್ಥವಾಗುತ್ತದೆ:

  • ನಿವೃತ್ತ ನ್ಯಾಯಮೂರ್ತಿಗಳಿಗೆ ರಾಜಕೀಯ ಭಿಕ್ಷೆ ಬೇಡ: ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಾಧೀಶರು ನಿವೃತ್ತರಾದ ತಕ್ಷಣ ಅವರಿಗೆ ರಾಜ್ಯಸಭಾ ಸೀಟುಗಳನ್ನು ನೀಡುವುದನ್ನು ಅಥವಾ ಸರ್ಕಾರದ ದೊಡ್ಡ ಹುದ್ದೆಗಳನ್ನು ನೀಡುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು. (ಇದು ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ಅಪವಿತ್ರ ಮೈತ್ರಿಗೆ ಇಟ್ಟ ತೀಕ್ಷ್ಣ ಇಂಜೆಕ್ಷನ್).
  • ಮಹಿಳೆಯರಿಗೆ ಶೇಕಡಾ 50 ರಷ್ಟು ನೈಜ ಮೀಸಲಾತಿ: ಕೇವಲ ಭಾಷಣಗಳಲ್ಲಿ ಅಥವಾ ಕಾಗದದ ಮೇಲಲ್ಲ, ನೈಜ ಅಧಿಕಾರದಲ್ಲಿ ಮಹಿಳೆಯರಿಗೆ ಸಮಾನ ಪಾಲು ಸಿಗಬೇಕು.
  • ‘ಗೋದೀ ಮೀಡಿಯಾ’ಗಳ ಕಳ್ಳಾಟಕ್ಕೆ ತಡೆ: ಆಡಳಿತ ಪಕ್ಷದ ಭಜನೆ ಮಾಡುತ್ತಾ, ದಿನದ 24 ಗಂಟೆಯೂ ದ್ವೇಷ ಬಿತ್ತುತ್ತಾ, ನಿರುದ್ಯೋಗ ಮತ್ತು ಬಡತನದಂತಹ ನೈಜ ಸಮಸ್ಯೆಗಳನ್ನು ಮರೆಮಾಚುವ ಪಕ್ಷಪಾತಿ ಕಾರ್ಪೊರೇಟ್ ಟಿವಿ ಮಾಧ್ಯಮಗಳ ವಿರುದ್ಧ ಕಠಿಣ ತನಿಖೆಯಾಗಬೇಕು.
  • ಮತದಾನದ ಹಕ್ಕು ಮತ್ತು ಸಾಂವಿಧಾನಿಕ ಸಂಸ್ಥೆಗಳ ರಕ್ಷಣೆ: ಇವಿಎಂ ತಿರುಚುವಿಕೆ ಅಥವಾ ಸಕ್ರಮ ಮತಗಳನ್ನು ಅಳಿಸಿಹಾಕುವ ಪ್ರಕ್ರಿಯೆಗೆ ಕಠಿಣ ಶಿಕ್ಷೆಯಾಗಬೇಕು.

ಇದನ್ನೂ ಓದಿ: SIR: ಪ್ರಜಾಪ್ರಭುತ್ವದ ಹೆಸರಲ್ಲಿ ‘ರಕ್ತರಹಿತ ನರಮೇಧ’! ರಾಜ್ಯಕ್ಕೆ ಕಾಲಿಟ್ಟ ಎಸ್‌ಐಆರ್; ಎಷ್ಟು ಲಕ್ಷ ಕನ್ನಡಿಗರ ವೋಟ್ ಡಿಲೀಟ್ ಆಗುತ್ತೆ ಗೊತ್ತಾ?

‘ರೋಚಕ್ ಸತ್ಸಂಗ್’: ಅಸಮಾಧಾನಿತ ಯುವಕರ ಡಿಜಿಟಲ್ ಸಂಸತ್ತು!

ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ಮಾಡುವುದಕ್ಕೆ ಸೀಮಿತವಾಗದ ಈ ಜಿರುಳೆ ಪಡೆ, ‘ರೋಚಕ್ ಸತ್ಸಂಗ್’ ಹೆಸರಿನಲ್ಲಿ ಆನ್‌ಲೈನ್ ಜಾಗೃತಿ ಸಭೆಗಳನ್ನು ನಡೆಸಿ ದೇಶದ ಪ್ರಸ್ತುತ ದುಸ್ಥಿತಿಯ ಬಗ್ಗೆ ಗಂಭೀರ ಚರ್ಚೆ ಆರಂಭಿಸಿದೆ. ಪರೀಕ್ಷಾ ಪೇಪರ್ ಸೋರಿಕೆ ಹಗರಣಗಳು, ಅತಿಯಾದ ಬೆಲೆ ಏರಿಕೆ, ಪದವಿ ಮುಗಿದರೂ ಸೂಕ್ತ ಉದ್ಯೋಗ ಸಿಗದಿರುವುದು ಮತ್ತು ಪ್ರಭುತ್ವದ ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ವಿದ್ಯಾರ್ಥಿಗಳು, ಯುವ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಇಲ್ಲಿ ದಿನನಿತ್ಯ ಧ್ವನಿ ಎತ್ತುತ್ತಿದ್ದಾರೆ.

“ನಾವು ಸಂವಿಧಾನವನ್ನು ನಂಬುತ್ತೇವೆ. ನಾವು ದೇಶದ ಸಂಸ್ಥೆಗಳನ್ನು ಧ್ವಂಸ ಮಾಡಲು ಬಂದಿಲ್ಲ, ಬದಲಿಗೆ ಪ್ರಜಾಪ್ರಭುತ್ವದ ಮಾರ್ಗದಲ್ಲೇ ವ್ಯವಸ್ಥೆಯನ್ನು ನಡುಗಿಸಲು ಬಂದಿದ್ದೇವೆ” ಎನ್ನುತ್ತಾರೆ ಇದರ ಸಂಸ್ಥಾಪಕ ಅಭಿಜೀತ್. ಮಹುವಾ ಮೊಯಿತ್ರಾ ಮತ್ತು ಕೀರ್ತಿ ಆಜಾದ್ ಅವರಂತಹ ಪ್ರಮುಖ ರಾಜಕೀಯ ನಾಯಕರು ಕೂಡ ಈ ಡಿಜಿಟಲ್ ಆಂದೋಲನದ ತೀಕ್ಷ್ಣತೆಗೆ ಬೆಚ್ಚಿಬಿದ್ದಿದ್ದಾರೆ ಮತ್ತು ಇದರ ವ್ಯಾಪ್ತಿಯನ್ನು ಒಪ್ಪಿಕೊಂಡಿದ್ದಾರೆ.

ಯುವ ಜನತೆಯನ್ನು ಜಿರಳೆ ಎನ್ನುವ ಅಹಂಕಾರಕ್ಕೆ ಇತಿಹಾಸವೇ ಪಾಠ!

ಭಾರತದ ಇಂದಿನ ಯುವ ಸಮೂಹ ಕಳೆದೊಂದು ದಶಕದಿಂದ ಕೇವಲ ಒಂದೇ ರೀತಿಯ ರಾಜಕೀಯ ಧ್ರುವೀಕರಣ, ದ್ವೇಷದ ಭಾಷಣಗಳು ಮತ್ತು ಸುಳ್ಳು ಭರವಸೆಗಳನ್ನು ನೋಡುತ್ತಾ ಬೆಳೆದಿದೆ. ಇಂದಿನ ತಲೆಮಾರಿಗೆ ಧರ್ಮ, ಜಾತಿಯ ರಾಜಕಾರಣಕ್ಕಿಂತ ಹೆಚ್ಚಾಗಿ ಬೇಕಿರುವುದು ಉದ್ಯೋಗ, ಆರ್ಥಿಕ ಭದ್ರತೆ ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ಅಭಿವ್ಯಕ್ತಿ ಸ್ವಾತಂತ್ರ್ಯ. ಆದರೆ ವ್ಯವಸ್ಥೆಯು ಯುವಕರ ಹಸಿವನ್ನು ನೀಗಿಸುವ ಬದಲು ಅವರನ್ನು ಕೇವಲ ಐಟಿ ಸೆಲ್‌ನ ಗುಲಾಮರನ್ನಾಗಿ ಮಾಡಲು ನೋಡುತ್ತಿದೆ.

ಯುವಕರು ಉದ್ಯೋಗ ಕೇಳಿದರೆ ಪಕೋಡಾ ಮಾರಲು ಹೇಳುವ ನಾಯಕರು ಒಂದೆಡೆಯಾದರೆ, ಹತಾಶೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಆರ್‌ಟಿಐ ಮೂಲಕ ಪ್ರಶ್ನೆ ಕೇಳುವ ಯುವಕರನ್ನು “ಜಿರಳೆಗಳು” ಎಂದು ಹೀಯಾಳಿಸುವ ನ್ಯಾಯಾಂಗದ ದರ್ಪ ಇನ್ನೊಂದೆಡೆ! ಜಿರಳೆ ಎಂದರೆ ಕತ್ತಲಲ್ಲಿ ಬದುಕುವ, ಕಸದಲ್ಲಿ ಇರುವ ಜೀವಿ ಎಂಬ ಅಸಡ್ಡೆ ಪ್ರಭುತ್ವಕ್ಕೆ ಇರಬಹುದು. ಆದರೆ ನೆನಪಿರಲಿ, ಜಿರಳೆ ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ, ಜಾಗತಿಕ ಅಣು ವಿನಾಶದ ಕಾಲದಲ್ಲೂ ಬದುಕುಳಿಯುವ ಏಕೈಕ ಜೀವಿ. ವ್ಯವಸ್ಥೆಯು ಯುವಕರನ್ನು ಜಿರಳೆಗಳೆಂದು ಜರೆದರೆ, ಅದೇ ಜಿರಳೆಗಳು ಒಟ್ಟಾಗಿ ಇಡೀ ಭ್ರಷ್ಟ ರಾಜಕೀಯ ಮತ್ತು ನ್ಯಾಯಾಂಗದ ಕೋಟೆಯನ್ನು ಕೊರೆದು ಹಾಕಬಲ್ಲವು ಎಂಬ ಎಚ್ಚರಿಕೆಯನ್ನು ಈ ಆಂದೋಲನ ನೀಡುತ್ತಿದೆ.

ವ್ಯಂಗ್ಯವೇ ಪ್ರಭುತ್ವದ ವಿರುದ್ಧದ ದೊಡ್ಡ ಬ್ರಹ್ಮಾಸ್ತ್ರ

‘ಕಾಕ್ರಾಚ್ ಜನತಾ ಪಾರ್ಟಿ’ ಕೇವಲ ಒಂದು ಆನ್‌ಲೈನ್ ಟ್ರೆಂಡ್ ಅಥವಾ ಕ್ಷಣಿಕ ಆವೇಶವಲ್ಲ. ಇತಿಹಾಸದುದ್ದಕ್ಕೂ ಪ್ರಭುತ್ವಗಳು ಮತ್ತು ಸರ್ವಾಧಿಕಾರಿಗಳು ಜೈಲು, ಲಾಠಿ ಮತ್ತು ಕಪ್ಪು ಕಾನೂನುಗಳಿಗೆ ಹೆದರಿದ್ದಕ್ಕಿಂತ ಹೆಚ್ಚಾಗಿ ತಮಗೆ ಎದುರಾಗುವ ‘ವ್ಯಂಗ್ಯ’ (Satire) ಮತ್ತು ಹಾಸ್ಯಕ್ಕೆ ಹೆದರಿದ್ದಾರೆ. ಏಕೆಂದರೆ ವ್ಯಂಗ್ಯವು ಅಧಿಕಾರದ ದರ್ಪವನ್ನು ನಗೆಪಾಟಲು ಮಾಡುತ್ತದೆ, ಅವರ ಅಹಂಕಾರದ ಮುಖವಾಡವನ್ನು ಕಳಚಿ ಹಾಕುತ್ತದೆ.

ಮುಖ್ಯ ನ್ಯಾಯಮೂರ್ತಿಗಳ ಒಂದು ಅಸೂಕ್ಷ್ಮ ಹೇಳಿಕೆ ಇಂದು ದೇಶದ ಸಹಸ್ರಾರು ಸುಶಿಕ್ಷಿತ ನಿರುದ್ಯೋಗಿಗಳ ಆಕ್ರೋಶದ ಅಣೆಕಟ್ಟನ್ನು ಒಡೆದಿದೆ. ಸಾಂಪ್ರದಾಯಿಕ ರಾಜಕೀಯ ಪಕ್ಷಗಳು ಯುವಕರ ಧ್ವನಿಯಾಗಲು ವಿಫಲವಾದಾಗ, ಇಂತಹ ಡಿಜಿಟಲ್ ಬಂಡಾಯಗಳು ಹುಟ್ಟಿಕೊಳ್ಳುತ್ತವೆ. ನ್ಯಾಯದ ಪೀಠದ ಮೇಲಿರುವವರು ಮತ್ತು ಸತ್ತೆಯ ಮದದಲ್ಲಿ ತೇಲುತ್ತಿರುವ ರಾಜಕಾರಣಿಗಳು ಇನ್ಮುಂದೆಯಾದರೂ ಯುವಜನತೆಯನ್ನು ಕೀಳಾಗಿ ಕಾಣುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ, ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಈ ‘ಜಿರಳೆಗಳ ಸೈನ್ಯ’ ಇಡೀ ವ್ಯವಸ್ಥೆಯ ತಳಹದಿಯನ್ನೇ ನಡುಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಇದು ಸೋಮಾರಿಗಳ ಸೋಗಿನಲ್ಲಿರುವ ಜಾಗೃತ ತರುಣರ ಆಕ್ರೋಶದ ಬಿರುಗಾಳಿ!

Praveen Yalligutti
Praveen Yalliguttihttp://asalisuddi.com
ಕನ್ನಡದ ವಿವಿಧ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 8 ವರ್ಷಗಳ ಕಾಲ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಸುದ್ದಿಗಳ ಅಸಲಿಯತ್ತನ್ನು ಮತ್ತು ನಿಖರವಾದ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಈಗ 'ಅಸಲಿ ಸುದ್ದಿ' (Asali Suddi) ಎನ್ನುವ ಸುದ್ದಿ ಸಂಸ್ಥೆಯನ್ನು ಆರಂಭಿಸಿದ್ದೇನೆ. ಸತ್ಯಕ್ಕೆ ಹತ್ತಿರವಾದ ಮತ್ತು ಜನೋಪಕಾರಿ ವರದಿಗಳನ್ನು ನೀಡುವುದೇ ನನ್ನ ಮೊದಲ ಆದ್ಯತೆ.
RELATED ARTICLES

Most Popular

Recent Comments