ಕನ್ನಡದ ಸಾಂಸ್ಕೃತಿಕ ಲೋಕದಲ್ಲಿ ವೈಚಾರಿಕ ಭಿನ್ನಾಭಿಪ್ರಾಯಗಳು ಹೊಸದೇನಲ್ಲ. ಆದರೆ, ಅಂತಹ ಭಿನ್ನಾಭಿಪ್ರಾಯಗಳನ್ನು ಎದುರಿಸುವ ಹಾದಿಯಲ್ಲಿ ಇಂದು ಕಾಣಿಸುತ್ತಿರುವ ಅಸಹಿಷ್ಣುತೆ ಮತ್ತು ದರ್ಪ ಆತಂಕಕಾರಿಯಾಗಿದೆ. ಇತ್ತೀಚೆಗೆ ನಟ ಚೇತನ್ ಅಹಂಸಾ (Chetan Ahamsa) ಅವರ ಟ್ವೀಟ್ ವಿಚಾರದಲ್ಲಿ ಸಾ ರಾ ಗೋವಿಂದು (Sa Ra Govindu) ಅವರು ನಡೆದುಕೊಂಡ ರೀತಿ ನಾಗರಿಕ ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತಿದೆ ಎಂಬ ಪ್ರಶ್ನೆ ಈಗ ಎದ್ದಿದೆ. ಚೇತನ್ ಅವರ ಮಾತುಗಳು ಸಂವಾದಕ್ಕೆ ಅರ್ಹವಾಗಿರಬಹುದು ಅಥವಾ ಖಂಡನೆಗೆ ಒಳಪಡಬಹುದು, ಆದರೆ ಸಾ ರಾ ಗೋವಿಂದು ಅವರು ಬಳಸಿದ “ಬರೋಲೇ, ಯಾವನೋಲೇ ನೀನು” ಎಂಬ ಭಾಷೆ ಮತ್ತು ಅಬ್ಬರ ಅಕ್ಷರಶಃ ಒಬ್ಬ ಗೂಂಡಾ ವರ್ತನೆಯ ಪ್ರತಿಬಿಂಬದಂತೆ ಕಂಡಿತು.
ಅಣ್ಣಾವ್ರು ಕಲಿಸಿದ ಸಂಸ್ಕಾರ ಎಲ್ಲಿದೆ?
ಡಾ. ರಾಜ್ಕುಮಾರ್ (Dr. Rajkumar) ಎನ್ನುವ ಮಹಾಚೇತನ ಕನ್ನಡಿಗರಿಗೆ ಬರಿ ನಟನಲ್ಲ, ಅವರು ಜೀವನ ಸಂಹಿತೆ. ಅಣ್ಣಾವ್ರ ಜೀವನದುದ್ದಕ್ಕೂ ಶತ್ರುಗಳನ್ನೂ ಪ್ರೀತಿಯಿಂದಲೇ ಗೆದ್ದವರು. ಅವರ ಹೆಸರನ್ನು ಬಳಸಿಕೊಂಡು ಸಾರ್ವಜನಿಕವಾಗಿ ಇಷ್ಟು ಕೀಳುಮಟ್ಟದ ಭಾಷೆ ಬಳಸುವುದು ಸ್ವತಃ ಅಣ್ಣಾವ್ರಿಗೆ ಮಾಡುವ ಅಪಚಾರವಲ್ಲವೇ? ಡಾ. ರಾಜ್ ಅಭಿಮಾನಿ ಎನ್ನುವವನಿಗೆ ಇರಬೇಕಾದ ಕನಿಷ್ಠ ಗುಣ ಸೌಜನ್ಯ. ಅದನ್ನು ಗಾಳಿಗೆ ತೂರಿ, ಬೀದಿ ರೌಡಿಗಳಂತೆ ಸವಾಲು ಹಾಕುವುದು ಸಾಂಸ್ಕೃತಿಕ ಹೋರಾಟ ಎನಿಸಿಕೊಳ್ಳಲು ಸಾಧ್ಯವೇ ಇಲ್ಲ. ಇದು ಅಣ್ಣಾವ್ರ ಹೆಸರಿನಲ್ಲಿ ನಡೆಸುತ್ತಿರುವ ಅಧಿಕಾರ ದರ್ಪವಷ್ಟೇ.
ಇದನ್ನೂ ಓದಿ: Chetan Ahimsa: ಮಿಸ್ಟರ್ ಚೇತನ್, ನಿಮಗಿದು ಬೇಕಿತ್ತಾ? ಸಮಾಜಮುಖಿ ಚಿಂತನೆಯ ಹೆಸರಲ್ಲಿ ಭಾವನೆಗಳಿಗೆ ಧಕ್ಕೆ ತರುವುದೇ ಜಾಗೃತಿಯೇ?
ಲಂಕೇಶ್ ಪತ್ರಿಕೆಯ ಮೇಲಿನ ದಾಳಿ: ಮರೆಯಲಾಗದ ಕರಾಳ ಇತಿಹಾಸ
ಸಾ ರಾ ಗೋವಿಂದು ಅವರ ಇಂದಿನ ವರ್ತನೆಯನ್ನು ನೋಡುವಾಗ ಅವರ ಹಳೆಯ ಇತಿಹಾಸ ನೆನಪಾಗುವುದು ಸಹಜ. ಇವರು ವೈಚಾರಿಕತೆಯನ್ನು ಹಿಂಸೆಯ ಮೂಲಕ ಹತ್ತಿಕ್ಕಲು ಪ್ರಯತ್ನಿಸಿದ್ದು ಇದೇ ಮೊದಲಲ್ಲ. ದಶಕಗಳ ಹಿಂದೆ ‘ಲಂಕೇಶ್ ಪತ್ರಿಕೆ’ಯಲ್ಲಿ ತಮ್ಮ ವಿರುದ್ಧ ಲೇಖನ ಪ್ರಕಟವಾದಾಗ, ಸಾ ರಾ ಗೋವಿಂದು ಮತ್ತು ಅವರ ಬೆಂಬಲಿಗರು ನಡೆಸಿದ ದಾಳಿ ಇಂದಿಗೂ ಮಾಧ್ಯಮ ಲೋಕದ ಕಪ್ಪು ಚುಕ್ಕೆ.
ಕಚೇರಿಗೆ ನುಗ್ಗಿ ಅಲ್ಲಿನ ಪೀಠೋಪಕರಣಗಳನ್ನು ದ್ವಂಸಗೊಳಿಸಿ, ಅಲ್ಲಿದ್ದ ಮಹಿಳಾ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಇತಿಹಾಸ ಇವರದ್ದು. ಅಂದು ಪಿ. ಲಂಕೇಶ್ ಅವರು ಕಚೇರಿಯಲ್ಲಿ ಇರಲಿಲ್ಲ ಎಂಬ ಕಾರಣಕ್ಕೆ ಬಚಾವಾದರೇ ಹೊರತು, ಅಂದು ನಡೆದಿದ್ದು ಅಕ್ಷರಶಃ ರೌಡಿಸಂ. ಈ ಪ್ರಕರಣದಲ್ಲಿ ಸಾ ರಾ ಗೋವಿಂದು ಬಂಧನಕ್ಕೊಳಗಾಗಿದ್ದರು. ಅಂದು ಅಣ್ಣಾವ್ರು ದೊಡ್ಡ ಮನಸ್ಸು ಮಾಡಿ ಲಂಕೇಶ್ ಅವರಿಗೆ ಫೋನ್ ಮಾಡಿ ಕ್ಷಮೆ ಕೇಳದಿದ್ದರೆ, ಸಾ ರಾ ಗೋವಿಂದು ಅವರ ಸಾರ್ವಜನಿಕ ಬದುಕು ಅಂದೇ ಅಂತ್ಯವಾಗುತ್ತಿತ್ತು. ಆದರೆ ಸಿಕ್ಕ ಕ್ಷಮಾದಾನವು ಇವರನ್ನು ತಿದ್ದುವ ಬದಲು, ಗೂಂಡಾಗಿರಿಯನ್ನು ಮುಂದುವರಿಸಲು ಪ್ರೇರೇಪಿಸಿದಂತಿದೆ.
ವಿಚಾರವನ್ನು ವಿಚಾರದಿಂದಲೇ ಗೆಲ್ಲಬೇಕು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಚೇತನ್ ಹೇಳಿದ್ದು ತಪ್ಪು ಎಂದಾದಲ್ಲಿ ಅದನ್ನು ದಾಖಲೆಗಳ ಮೂಲಕ, ತರ್ಕದ ಮೂಲಕ ಸಾರ್ವಜನಿಕವಾಗಿ ಬಯಲಿಗೆಳೆಯಬೇಕಿತ್ತು. ಅದು ಬಿಟ್ಟು ಅಸಭ್ಯವಾಗಿ ವರ್ತಿಸುವುದು ಮತ್ತು ದೈಹಿಕ ಹಲ್ಲೆಯ ಬೆದರಿಕೆ ಹಾಕುವುದು ಅಸಹಾಯಕತೆಯ ಲಕ್ಷಣ. ಪ್ರಬುದ್ಧ ಹೋರಾಟಗಾರ ಎನಿಸಿಕೊಂಡವನು ಮಾತುಗಳಿಂದ ಎದುರಾಳಿಯನ್ನು ನಿರುತ್ತರಗೊಳಿಸಬೇಕೇ ಹೊರತು, ತೋಳ್ಬಲದಿಂದಲ್ಲ.
ಇದನ್ನೂ ಓದಿ: RB Timmapur: ಅಬಕಾರಿ ಸಚಿವರ ತವರಲ್ಲೇ ಎಗ್ಗಿಲ್ಲದ ಮದ್ಯದ ದರ್ಬಾರ್! ಮಾಧ್ಯಮ ರಂಗಕ್ಕೂ ಅಂಟಿದ ‘ಸರಾಯಿ’ ಕಳಂಕ (Part 2)
ಸಾಂಸ್ಕೃತಿಕ ನಾಯಕತ್ವದ ಹೊಣೆಗಾರಿಕೆ
ಕನ್ನಡ ಪರ ಸಂಘಟನೆಗಳ ಅಥವಾ ಚಿತ್ರರಂಗದ ಪ್ರಮುಖ ಸ್ಥಾನಗಳಲ್ಲಿರುವವರು ಸಮಾಜಕ್ಕೆ ಮಾದರಿಯಾಗಿರಬೇಕು. ಸಾ ರಾ ಗೋವಿಂದು ಅಂತಹ ಹಿರಿಯರು ಇಂದಿನ ಯುವ ಪೀಳಿಗೆಗೆ ಯಾವ ಮಾದರಿ ನೀಡುತ್ತಿದ್ದಾರೆ? “ಯಾರಾದರೂ ನಮ್ಮನ್ನು ಪ್ರಶ್ನಿಸಿದರೆ ಅವರ ಮೇಲೆ ಹಲ್ಲೆ ಮಾಡಿ” ಎಂಬ ಸಂದೇಶವನ್ನೇ? ಇಂತಹ ಪ್ರವೃತ್ತಿಯಿಂದ ಕನ್ನಡದ ಘನತೆ ಹೆಚ್ಚಾಗುವುದಿಲ್ಲ.
ಯಾವುದೇ ವಿಷಯವನ್ನಾದರೂ ವಿಷಯದ ಮೂಲಕವೇ ಖಂಡಿಸುವುದು ನಾಗರಿಕತೆಯ ಲಕ್ಷಣ. ನಿನ್ನೆ ಚೇತನ್ ಮೇಲೆ ಸಾ ರಾ ತೋರಿದ ದರ್ಪ ಒಪ್ಪುವಂತದ್ದಲ್ಲ. ಅದು ಅಣ್ಣಾವ್ರ ಅಭಿಮಾನದ ಹೆಸರಿನಲ್ಲಿ ನಡೆದ ಅತಿಕ್ರಮಣ. ಡಾ. ರಾಜ್ ಕುಮಾರ್ ಅವರಂಥ ದೊಡ್ಡ ವ್ಯಕ್ತಿತ್ವದ ನೆರಳಿನಲ್ಲಿ ನಿಂತು ಗೂಂಡಾ ವರ್ತನೆ ತೋರುವುದು ಅಣ್ಣಾವ್ರಿಗೆ ನಾವು ಸಲ್ಲಿಸುವ ಗೌರವವಲ್ಲ, ಬದಲಿಗೆ ಅವರಿಗೆ ಮಾಡುವ ದೊಡ್ಡ ಅವಮಾನ. ಇನ್ನಾದರೂ ಸಾ ರಾ ಗೋವಿಂದು ಅಂತಹವರು ತಮ್ಮ ದರ್ಪವನ್ನು ಬಿಟ್ಟು ವೈಚಾರಿಕ ಹಾದಿಯಲ್ಲಿ ಸಾಗಲಿ. ಗೂಂಡಾಗಿರಿ ಯಾವತ್ತೂ ಪರಿಹಾರವಾಗಲಾರದು.

